ಸಾರಾಂಶ
ಕಟ್ಟೆಮಾಡು ಗ್ರಾಮದ ಶ್ರೀಮಹಾಮೃತ್ಯುಂಜಯ ದೇವಾಲಯದಲ್ಲಿ ಈಗ ಅಸ್ತಿತ್ವದಲ್ಲಿರುವ ಆಡಳಿತ ಮಂಡಳಿಯನ್ನು ಉಚ್ಛಾಟಿಸಿ ಸರ್ಕಾರ ದೇವಾಲಯವನ್ನು ತನ್ನ ಅಧೀನಕ್ಕೆ ಪಡೆಯಬೇಕು ಎಂದು ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಈಗ ಅಸ್ತಿತ್ವದಲ್ಲಿರುವ ಆಡಳಿತ ಮಂಡಳಿಯನ್ನು ಉಚ್ಛಾಟಿಸಿ ಸರ್ಕಾರ ದೇವಾಲಯವನ್ನು ತನ್ನ ಅಧೀನಕ್ಕೆ ಪಡೆಯಬೇಕೆಂದು ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಈಗ ಇರುವ ದೇವಾಲಯ ಆಡಳಿತ ಮಂಡಳಿ ಜಾತಿವಾದಿಯಾಗಿದ್ದು, ಸಂಘರ್ಷಕ್ಕೆ ನಾಂದಿ ಹಾಡಿದೆ. ಅತ್ಯಂತ ಪ್ರಾಚೀನವಾದ ಮಾದೇವ ದೇವಸ್ಥಾನದ ಹೆಸರನ್ನು ಬಾಡಗರಕೇರಿ ಮೃತ್ಯುಂಜಯ ದೇವಾಲಯಕ್ಕೆ ಪರ್ಯಾಯವಾಗಿ ಶ್ರೀ ಮಹಾಮೃತ್ಯುಂಜಯ ದೇವಾಲಯವೆಂದು ಬದಲಾಯಿಸಿ ಆಡಳಿತ ಮಂಡಳಿ ರಚಿಸಲಾಗಿದೆ ಎಂದು ಆರೋಪಿಸಿದರು.ಮಾದೇವ ದೇವರ ಹೆಸರಿನಡಿ ಸ್ಥಳೀಯ ಸಂಪ್ರದಾಯಕ್ಕೆ ಬದ್ಧವಾಗಿ ಆಡಳಿತ ನಡೆಸಲು ಅಖಿಲ ಕೊಡವ ಸಮಾಜ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.ಕಟ್ಟೆಮಾಡು ಪಾಪಳಕೇರಿ ಮಾದೇವ ದೇವರ ಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ಪಾಲೇರಿ ರಾಜವಂಶ ಸ್ಥಾಪನೆಯಾಗುವ ಮೊದಲೇ ಈ ದೇವಾಲಯವಿದ್ದು, ಕೆಲವು ಕೊಡವ ಭಾಷಿಕ ಕುಟುಂಬಗಳು ವರ್ಷಾವಧಿ ಪೂಜೆ ನಡೆಸುತ್ತಾ ಬಂದಿದೆ. ಆದರೆ ಕೆಲವು ಪ್ರಭಾವಿ ಜಾತಿವಾದಿಗಳು ಜನರ ದಿಕ್ಕು ತಪ್ಪಿಸಿ ಮಾದೇವ ದೇವರ ಸ್ಥಾನದ ಹೆಸರನ್ನು ಮೃತ್ಯುಂಜಯವೆಂದು ಮರುನಾಮಕರಣ ಮಾಡಿ ಹೊರನಾಡಿನ ಸಂಪ್ರದಾಯವನ್ನು ಮೂಲನಿವಾಸಿಗಳ ಮೇಲೆ ಹೇರುವ ಪ್ರಯತ್ನಗಳು ನಡೆದಿದೆ ಎಂದು ಪರದಂಡ ಸುಬ್ರಮಣಿ ಆರೋಪಿಸಿದರು.
ಜಂಟಿ ಕಾರ್ಯದರ್ಶಿ ನಂದೇಟಿರ ರಾಜಾ ಮಾದಪ್ಪ ಮಾತನಾಡಿ, ದೇವಾಲಯದಲ್ಲಿ ಸಂಘರ್ಷ ನಡೆದಿದ್ದು, ಹಲ್ಲೆ ಕೂಡ ಆಗಿದೆ. ದೇವಾಲಯಗಳ ಉತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಉಡುಪು ತೊಡಲು ಅವಕಾಶವಿದೆ, ಕೇರಳದ ದೇವಾಲಯಗಳಿಗೂ ಕೊಡವ ಉಡುಪು ತೊಡುತ್ತೇವೆ. ಎಲ್ಲೂ ಇಲ್ಲದ ಅಡ್ಡಿ ಇಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕೊಡವ ಉಡುಪು ತೊಟ್ಟರೆ ಯಾವುದೇ ಭಕ್ತರಿಗೆ ತೊಂದರೆಯಾಗುವುದಿಲ್ಲ, ನಮ್ಮ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ ಅಷ್ಟೆ. ದೇವಾಲಯದ ಕಾರ್ಯಗಳು ಸುಸೂತ್ರವಾಗಿ ಒಗ್ಗಟ್ಟನಿಂದ ನಡೆಯಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಆದರೆ ಕೊಡವ ಸಾಂಪ್ರದಾಯಿಕ ಉಡುಪಿಗೆ ಅಡ್ಡಿಯಾಗಬಾರದು ಎಂದರು.ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಕಾರ್ಯದರ್ಶಿ ಕೀತಿಯಂಡ ವಿಜಯ್ ಕುಮಾರ್ ಹಾಗೂ ಜಂಟಿ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.