ಸಾರಾಂಶ
ಗಣಪತಿ ಪಾರ್ಥನೆ, ಅಸ್ಟೋತ್ತರ ಪೂಜೆ, ದೂಪ ದೀಪಗಳೊಂದಿಗೆ ಕಾವೇರಿ ಮಾತೆಗೆ ಸಂಕಲ್ಪ ಮಾಡಲಾಯಿತು. ಪಟ್ಟಣದಲ್ಲಿ ದಸರಾ ಮಹೋತ್ಸವ ನಡೆಯುವ ಹಾಗೆ ಕಾವೇರಿ ನದಿಗೆ ಅ.3ರಿಂದ 5 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದಸರಾ ಮಹೋತ್ಸವ ಅಂಗವಾಗಿ ಪಟ್ಟಣದ ಸ್ನಾನಘಟ್ಟದಲ್ಲಿ ಕಾವೇರಿ ಮಾತೆಗೆ ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ 15ಕ್ಕೂ ಹೆಚ್ಚು ವೈದಿಕರ ತಂಡದೊಂದಿಗೆ ಕಾವೇರಿ ಆರತಿಗೆ ಚಾಲನೆ ನೀಡಲಾಯಿತು.ಜಿಲ್ಲಾಧಿಕಾರಿ ಡಾ.ಕುಮಾರ್ ನೇತೃತ್ವದಲ್ಲಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಸಾರಥ್ಯದ ವೈದಿಕರ ತಂಡವು ಕಾವೇರಿ ನದಿಗೆ ವಿಧಿ ವಿಧಾನಗಳ ಮೂಲಕ ಗಂಧದಕಟ್ಟಿ ಪೂಜೆ, ದೂಪಾರತಿ, ಕರ್ಪೂರದ ಆರತಿ ಬೆಳಗಿ ಕಾವೇರಿ ಮಾತೆಗೆ ನಮನ ಸಲ್ಲಿಸಿದರು.
ಗಣಪತಿ ಪಾರ್ಥನೆ, ಅಸ್ಟೋತ್ತರ ಪೂಜೆ, ದೂಪ ದೀಪಗಳೊಂದಿಗೆ ಕಾವೇರಿ ಮಾತೆಗೆ ಸಂಕಲ್ಪ ಮಾಡಲಾಯಿತು. ಪಟ್ಟಣದಲ್ಲಿ ದಸರಾ ಮಹೋತ್ಸವ ನಡೆಯುವ ಹಾಗೆ ಕಾವೇರಿ ನದಿಗೆ ಅ.3ರಿಂದ 5 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.ಉತ್ತರ ಭಾರತದಲ್ಲಿನ ಗಂಗಾರತಿ ಮಾದರಿಯಲ್ಲಿ ದಕ್ಷಣ ಭಾರತದಲ್ಲಿ ಪ್ರಥಮ ಭಾರಿಗೆ ಭಾಗ ಮಂಡಲದಿಂದ ಪುಂಪಾರ್ಗೆ ಹರಿಯುವ ಕಾವೇರಿ ನದಿಗೆ ನಮನ ಸಲ್ಲಿಸುವ ಸಲುವಾಗಿ ಕಾವೇರಿ ಆರತಿ ನಡೆಸಲಾಯಿತು.
ಶಾಸ್ವತಿ ಧಾರ್ಮಿಕ ಕ್ರಿಯಾ ಸಮಿತಿಯಿಂದ ಪ್ರತಿ ವರ್ಷ ತುಲಾ ಮಾಸದಲ್ಲಿ ಕಾವೇರಿ ಆರತಿ ಮಾಡಲಾಗುತ್ತಿತ್ತು. ಆದರೆ, ದಸರಾ ಹಿನ್ನೆಲೆಯಲ್ಲಿ ಒಂದು ತಿಂಗಳು ಮುಂಚಿತವಾಗಿ ಆಚರಣೆ ಮಾಡಲಾಗಿದೆ ಎಂದು ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ತಿಳಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಜನತೆ:
ಇತ್ತೀಚೆಗೆ ಉತ್ತರ ಭಾರತದ ಕಾಶಿಯ ವಾರಣಾಸಿ ಸೇರಿದಂತೆ ಇತರೆ ಪ್ರದೇಶಗಳಿಗೆ ಮೈಸೂರು, ಮಂಡ್ಯ ಭಾಗದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆರಳಿ ಗಂಗೆ ಮಾದರಿಯಲ್ಲೇ ಕಾವೇರಿ ಮಾತೆಗೆ ಆರತಿ ಮಾಡುವ ಸಂಬಂಧ ಅಧ್ಯಯನ ನಡೆಸಿ ಬಂದಿದ್ದರು.ಜಿಲ್ಲಾಡಳಿತದಿಂದ ಸಮರ್ಪಕ ಪ್ರಚಾರವಿಲ್ಲದ ಕಾರಣ ಹೆಚ್ಚಿನ ಸಾರ್ವಜನಿಕರಿಲ್ಲದೆ ಪೂಜಾ ಕಾರ್ಯ ನೆರವೇರಿತು. ಸ್ನಾನಘಟ್ಟ ಬಳಿಯ ಕಾವೇರಿ ನದಿಗೆ ತೆರಳುವ ಮಾರ್ಗ ಮಧ್ಯೆ ಮಾತ್ರ ಜಿಲ್ಲಾಡಳಿತ ಎಂದು ನಾಮಫಲಕ ಅಳವಡಿಸಿರುವುದು ಹೊರತು ಪಡಿಸಿ ಯಾವುದೇ ಪ್ರಚಾರ ಕೈಗೊಂಡಿಲ್ಲ. ಇದರಿಂದ ಹೆಚ್ಚು ಜನರು ಆಗಮಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ವೇಳೆ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ಜಿಪಂ ಸಿಇಒ ಶೇಖ್ ತನ್ವೀರ್ ಆಶೀಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಸಿ.ಇ ತಿಮ್ಮಯ್ಯ, ಡಿವೈಎಸ್ಪಿ ಮುರಳಿ, ಪುರಸಭಾ ಸದಸ್ಯರು ಸೇರಿದಂತೆ ಇತರರು ಇದ್ದರು.