ಸಾರಾಂಶ
ಕಾವೇರಿ ಆರತಿ ರಾಜ್ಯದ ಸಂಸ್ಕೃತಿ. ಪ್ರವಾಸಿಗರು ಧಾರ್ಮಿಕವಾಗಿ ಪೂಜೆ ಮಾಡಲು ಅವಕಾಶ ಮಾಡಿಕೊಡಲು ತೀರ್ಮಾನಿಸಿರುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಂದಿನ ದಸರಾ ಹಬ್ಬದ ವೇಳೆಗೆ ಕೆಆರ್ಎಸ್ನಲ್ಲಿ ಕಾವೇರಿ ಆರತಿ ಆರಂಭಿಸಲು ನಿರ್ಧರಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿರುವ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕೆಆರ್ಎಸ್ನಲ್ಲಿ ಕಾವೇರಿ ಆರತಿ ಮಾಡುವುದಾಗಿ ಘೋಷಣೆ ಮಾಡಿದ್ದೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ 92 ಕೋಟಿ ಮಂಜೂರಾಗಿದೆ. ಕಾವೇರಿ ಆರತಿ ರಾಜ್ಯದ ಸಂಸ್ಕೃತಿ. ಪ್ರವಾಸಿಗರು ಧಾರ್ಮಿಕವಾಗಿ ಪೂಜೆ ಮಾಡಲು ಅವಕಾಶ ಮಾಡಿಕೊಡಲು ತೀರ್ಮಾನಿಸಿರುವುದಾಗಿ ಹೇಳಿದರು.ಕಾವೇರಿ ಆರತಿ ರಾಜ್ಯದ ಸಂಸ್ಕೃತಿ. ಕಾವೇರಿ ನೀರು ಅವಲಂಬಿಸಿರುವ ಎಲ್ಲಾ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಕೇರಳ ತಮಿಳುನಾಡು ಜನರು ಬಂದು ಪೂಜೆ ಸಲ್ಲಿಸಬಹುದು ಎಂದ ಅವರು, ಕಾವೇರಿ ಆರತಿ ಹೇಗಿರಬೇಕು, ಯಾವ ಸ್ಥಳದಲ್ಲಿ ನಡೆಯಬೇಕು ಎಂಬ ಬಗ್ಗೆ ಸಲಹೆ ನೀಡಲು ಇಲ್ಲಿಗೆ ಬಂದಿದ್ದೇನೆ. ಅದಕ್ಕಾಗಿ ಇಬ್ಬರು ಜಿಲ್ಲಾಧಿಕಾರಿಗಳನ್ನು ಒಳಗೊಂಡಂತೆ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದೇನೆ. ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಕಾವೇರಿ ಆರತಿ ಹೇಗಿರಬೇಕು ಎಂಬುದನ್ನು ತಿಳಿಸಿದ್ದೇನೆ ಎಂದರು.ಕಾವೇರಿ ಆರತಿಗೆ ಬರುವ ಜನರಿಗೆ ಎರಡು ರೀತಿಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಒಂದು ಉಚಿತ ಪ್ರವೇಶ ಹಾಗೂ ಟಿಕೆಟ್ ಪಡೆದು ಪ್ರವೇಶ ನೀಡಲು ನಿರ್ಧರಿಸಿದೆ. ಹತ್ತು ಸಾವಿರ ಜನರು ಒಂದೇ ಕಡೆ ಕುಳಿತು ಕಾವೇರಿ ಆರತಿ ನೋಡುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ವಾರದಲ್ಲಿ ಎಷ್ಟು ಬಾರಿ ಆರತಿ ನಡೆಯಬೇಕು ಎಂಬುದನ್ನು ಮುಂದೆ ತೀರ್ಮಾನಿಸುತ್ತೇವೆ. ಇದರಿಂದ ಬಂದ ಹಣವನ್ನ ನಾವು ಪಂಚಾಯಿತಿ ಅಭಿವೃದ್ಧಿಗೆ ಬಳಸುತ್ತೇವೆ. ಇಲ್ಲಿನ ಹಣವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಆಸೆ ನಮಗಿಲ್ಲ ಎಂದು ನುಡಿದರು.ಬೃಂದಾವನ ಉನ್ನತಿಕರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ನಾಲ್ಕು ಪಂಚಾಯಿತಿಗಳು ಬರಲಿವೆ. ಅವುಗಳ ಅಧಿಕಾರದಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ. ಪಂಚಾಯಿತಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದೇವೆ. ಮಲೆ ಮಹದೇಶ್ವರ ಬೆಟ್ಟ ಕೂಡ ಅಭಿವೃದ್ಧಿ ಆಗಿದೆ. ಅಲ್ಲಿ ಕೂಡ ಪಂಚಾಯತಿಯ ಅಧಿಕಾರ ಕಸಿದುಕೊಂಡಿಲ್ಲ. ಸ್ಥಳೀಯರ ಉದ್ಯೋಗಕ್ಕೆ ಪಂಚಾಯತಿ ಕಡೆಯಿಂದಲೇ ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ಕಾವೇರಿ ಅಮ್ಯೂಸ್ಮೆಂಟ್ ಪಾರ್ಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಯೋಜನೆಗೆ ವಿರೋಧ ಮಾಡುತ್ತಿರುವ ರೈತರನ್ನು ಕರೆದು ನಾನು ಮಾತನಾಡುತ್ತೇನೆ. ರೈತ ಸಂಘಟನೆಗಳಿಗೆ ಇಂತಹ ವಿಚಾರಗಳು ಗೊತ್ತಿಲ್ಲ. ಅಣೆಕಟ್ಟು ಭದ್ರತೆಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತೇವೆ. ಗೇಟ್ಗಳ ಬದಲಾವಣೆ ಮಾಡಬೇಕಾದ ಕಡೆ ಅಗತ್ಯವಾಗಿ ಮಾಡುತ್ತೇವೆ ಎಂದು ನುಡಿದರು.ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ. ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ. ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಓ ಕೆ.ಆರ್.ನಂದಿನಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಕಾವೇರಿ ನೀರಾವರಿ ನಿಗಮದ ಎಂ.ಡಿ.ಮಹೇಶ್ ಇತರರಿದ್ದರು.ಬಾಕ್ಸ್------ಬೋಟಿಂಗ್ ಪಾಯಿಂಟ್ ಬಳಿ ಕಾವೇರಿ ಆರತಿಕೃಷ್ಣರಾಜಸಾಗರ ಜಲಾಶಯದ ಬೋಟಿಂಗ್ ಪಾಯಿಂಟ್ ಬಳಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಆರತಿ ಸಂಬಂಧ ನಿಗದಿಯಾಗಿರುವ ಸ್ಥಳವನ್ನು ಅಧಿಕಾರಿಗಳ ಜೊತೆ ತೆರಳಿ ಅಂತಿಮ ಹಂತದ ಪರಿಶೀಲನೆ ನಡೆಸಿದರು. ಜಿಲ್ಲೆಯ ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್--------ಈ ಬಾರಿ ವಿನೂತನ ದಸರಾ; ಕಂಬಳ ಸೇರ್ಪಡೆಈ ಬಾರಿ ನಾಡಹಬ್ಬ ದಸರಾವನ್ನು ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ. ಹಳೆಯ ಒಂದಷ್ಟು ಪದ್ದತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಆಕರ್ಷಿಸುವಂತಹ ಕಾರ್ಯಕ್ರಮಗಳ ಆಯೋಜನೆಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಭೆ ನಡೆಸೋಣ ಎಂದಿದ್ದಾರೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗದ ವಿಶೇಷ ಆಚರಣೆ, ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸ್ಥಳ ಹುಡುಕುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.ಬಾಕ್ಸ್-------ಕಾವೇರಿ ಆರತಿ ಯೋಜನೆ ರೂಪಿಸಲು ಸಮಿತಿ ರಚನೆಗಂಗಾರತಿ ರೀತಿ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಕೆಆರ್ಎಸ್ ಅಣೆಕಟ್ಟೆಯ ಸುತ್ತ ಡಿ.ಕೆ. ಶಿವಕುಮಾರ್ ಸ್ಥಳೀಯ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ. ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.ಕಂದಾಯ, ಮುಜರಾಯಿ, ಪ್ರವಾಸೋದ್ಯಮ, ನೀರಾವರಿ, ಚೆಸ್ಕಂ ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಸಮಿತಿಯನ್ನು ರಚಿಸಲಾಗಿದೆ. ಇನ್ನೆರಡು ದಿನದಲ್ಲಿ ನೀಲಿ ನಕ್ಷೆ ತಯಾರಿಸಲಾಗುವುದು. ವಿದ್ಯುತ್ ಅಲಂಕಾರ ಸೇರಿದಂತೆ ಹಲವು ಇಲಾಖೆಯಿಂದಲೂ ಹಣವನ್ನು ಬಳಸಿಕೊಳ್ಳಲಾಗುವುದು. ಸಮರ್ಪಕ ರಸ್ತೆ ನಿರ್ಮಿಸಿ ಧಾರ್ಮಿಕವಾಗಿ ಕುಟುಂಬ ಸಮೇತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ನುಡಿದರು.ಬಾಕ್ಸ್..--- ಡಿಕೆಶಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಶೆಫ್ಕೆಆರ್ಎಸ್ಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಖಾಸಗಿ ಹೋಟೆಲ್ನ ಶೆಫ್ ಒಬ್ಬ ಕಲ್ಲಂಗಡಿಯಲ್ಲಿ ಡಿಕೆಶಿ ಚಿತ್ರ ಕೆತ್ತಿ ಉಡುಗೊರೆಯಾಗಿ ನೀಡಿದನು. ಸಪ್ನನಾಯ್ಕ್ ಎಂಬಾತ ಕಲ್ಲಂಗಡಿಯಲ್ಲಿ ಅರಳಿಸಿ ನೀಡಿದ ಡಿಕೆಶಿ ಭಾವಚಿತ್ರದ ವಿಶೇಷ ಉಡುಗೊರೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದರು.ಬಾಕ್ಸ್-------- ಕ್ಷಮೆ ಕೇಳಿದ ಶಾಸಕ ರಮೇಶ್ ಬಂಡಿಸಿದ್ದೇಗೌಡಕನ್ನಡಪ್ರಭ ವಾರ್ತೆ, ಮಂಡ್ಯಪಹಲ್ಗಾಮ್ ಘಟನೆಗೆ ಜಮ್ಮ-ಕಾಶ್ಮೀರದಲ್ಲಿ ಆರ್ಟಿಕಲ್ 370 ಕಾಯಿದೆ ತೆಗೆದಿದ್ದೇ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಕ್ಷಮೆಯಾಚಿಸಿದರು.ರಮೇಶ್ ಬಂಡಿಸಿದ್ದೇಗೌಡರು ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಇದೀಗ ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದು ಕ್ಷಮೆಯಾಸಿರುವ ಶಾಸಕರು, ನಾನು ಹಾಗೆ ಹೇಳಬಾರದಿತ್ತು. ನನ್ನ ಮಾತಿನಿಂದ ಎಲ್ಲರಿಗೂ ನೋವಾಗಿದೆ. ನಾನು ಎಲ್ಲರಲ್ಲೂ ಕ್ಷಮೆಯಾಚನೆ ಮಾಡುತ್ತೇನೆ. ಸರ್ಕಾರಗಳು ಭದ್ರತೆಯನ್ನು ಹೆಚ್ಚಿಸಬೇಕು. ನರಮೇಧ ಮಾಡಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.