ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ನೀರಿಲ್ಲದೆ ಬತ್ತಿ ಹೋಗಿರುವ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ಅಥವಾ ಕೃಷ್ಣಾ ನದಿಯ ಆಲ್ಮಟ್ಟಿ, ನಾರಾಯಣಪುರ ಜಲಾಶಯಿದಂದಲಾದರೂ ನೀರು ಹರಿಸಬೇಕೆಂಬ ಕೂಗು ಭೀಮಾ ನದಿ ತೀರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ನದಿ ಬತ್ತಿ 3 ತಿಂಗಳಾಯ್ತು, ರಣ ಬಿಸಿಲಲ್ಲಿ ಜನ-ಜಾನುವಾರು ದಾಹ ಹೆಚ್ಚುತ್ತಿದೆ. ನದಿಯಲ್ಲಿ ನೀರು ಹರಿದರೇನೇ ಸಮಸ್ಯೆಗೆ ಪರಿಹಾರವೆಂದು ಜನ ಆಗ್ರಹಿಸುತ್ತಿದ್ದಾರೆ. ಇದೇ ಸಮಸ್ಯೆ ಮುಂದಿಟ್ಟುಕೊಂಡು ಶುರುವಾಗಿರುವ ಆಮರಣ ಉಪವಾಸ ಸತ್ಯಾಗ್ರಹ 5 ನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಕೈಗೊಂಡಿರುವ ರೈತ ಹೋರಾಟಗಾರ ಶಿವಕುಮಾರ್ ನಾಟೀಕಾರ್ ದೇಹಸ್ಥಿತಿ ಬಿಗಡಾಯಿಸುತ್ತಿದೆ. ಸೋಮವಾರ ರಾತ್ರಿ ವೈದ್ಯರ ತಂಡ ನಾಟೀಕಾರ್ ಅವರನ್ನು ತಪಾಸಣೆ ನಡೆಸಿದೆ.
ಭೀಮಾ ತೀರದಲ್ಲಿ ಜನರ ಹೋರಾಟ ಉಗ್ರಸ್ವರೂಪ ಪಡೆದುಕೊಳ್ಳುವ ಲಕ್ಷ್ಮಗಳಿವೆ, ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಇಲ್ಲಿನ ಹಾಲಿ ಸಾಸಕ ಎಮವೈ ಪಾಟೀಲ್, ಮಾಜಿ ಶಾಸಕ ಮಾಲೀಕಯ್ಯಾ ಗುತ್ತೇದಾರ್ ಇಬ್ಬರೂ ಸಮಸ್ಯೆ ಪರಿಹಾರ ಹುಡುಕುವ ಪ್ರಯತ್ನದ ಭಾಗವಾಗಿ ರಾಜಧಾನಿಗೆ ದೌಡಾಯಿಸಿದ್ದಾರೆ.ಜಲ ಸಂಪನ್ಮೂಲ ಇಲಾಖೆಗೆ ಮನವರಿಗೆ ಮಾಡಿಕೊಡುವ ಮೂಲಕ ಕೃಷ್ಣಾ ನದಿಯಿಂದಲಾದರೂ ತಕ್ಷಣಕ್ಕೆ 2 ಅಥವಾ 3 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಬೇಕು ಎಂಬುದೇ ಇವರ ಉದ್ದೇಶವಾಗಿದೆ. ಆದರೆ ಕೃಷ್ಣಾನದಿಯಲ್ಲೂ ನೀರಿನ ತತ್ವಾರ ಇರೋದರಿಂದ ಈ ಕೆಲಸವು ಸುಲಭದಲ್ಲಿ ಕೈಗೂಡದಂತಾಗಿದೆ. ಹೀಗಾಗಿ ಭೀಮಾ ತೀರದಲ್ಲಿ ನೀರಿಲ್ಲದೆ ಕಾವು ಹೆಚ್ಚಿದೆ. ಜೊತೆಗೇ ರೈತರ ಹೋರಾಟದಿಂದಲೂ ಕಾವು ಹೆಚ್ಚುತ್ತ ಸಾಗಿದೆ.
ನಾಟೀಕಾರ್ ಆರೋಗಗ್ಯದಲ್ಲಿ ಏರುಪೇರು: ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು, ಕೂಡಲೇ ಉಜನಿ ಆಣೆಕಟ್ಟೆಯಿಂದ 5 ಟಿಎಂಸಿ ನೀರು ಭೀಮಾ ನದಿಗೆ ಹರಿಸಬೇಕು ಎಂದು ಒತ್ತಾಯಿಸಿ ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಿರತರಾಗಿರುವ ಹೋರಾಟಗಾರ ಶಿವಕುಮಾರ್ ನಾಟೀಕಾರ್ ಆರೋಗ್ಯ ಕ್ಷೀಣಿಸಿದೆ.ಏತನ್ಮಧ್ಯೆ ಪಕ್ಷಭೇದ ಮರೆತು ಹೋರಾಟಕ್ಕೆ ಬೆಂಬಲಿಸಿರುವ ಶಾಸಕ ಎಂವೈ ಪಾಟೀಲ್ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ನಿರಶನ ಕೈಬಿಡುವಂತೆ ಶಿವಕುಮಾರ್ಗೆ ಕೋರಿದ್ದಾರೆ.ಭೀಮಾ ತೀರದಲ್ಲೆಲ್ಲಾ ಹಾಹಾಕಾರ ಉಂಟಾಗಿದೆ. ಕೂಡಲೇ ಭೀಮಾ ನದಿಗೆ ನೀರು ಬಿಡಲು ಈಗಾಗಲೇ ನಾನು ಕೋರಿದ್ದೇನೆ. ಆಲಮಟ್ಟಿ ಇಲ್ಲವೇ ನಾರಾಯಣಪುರ ಜಲಾಶಯಗಳಿಂದ ಭೀಮಾ ನದಿಗೆ ನೀರಿ ಹರಿಸಬೇಕಾದರೆ ಬಹಳ ದೂರವಾಗುತ್ತದೆ. ಅಲ್ಲದೇ ನಾರಾಯಣಪುರ ಮತ್ತು ಆಲಮಟ್ಟಿಯಲ್ಲಿಯೂ ಸಹ ನೀರಿನ ಸಂಗ್ರಹ ಕಡಿಮೆ ಇದೆ. ಹಾಗಾಗಿ ಉಜನಿ ಆಣೆಕಟ್ಟೆಯಿಂದ ನಮಗೆ ಬರಬೇಕಾದ 15 ಟಿಎಂಸಿ ನೀರಿನಲ್ಲಿ ತುರ್ತಾಗಿ 5 ಟಿಎಂಸಿ ನೀರು ಬಿಡಲು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮೇಲೆ ಒತ್ತಡ ತರುವೆ.
- ಎಂವೈ ಪಾಟೀಲ್, ಶಾಸಕರು, ಅಫಜಲ್ಪುರಭೀಮಾ ನದಿಯಲ್ಲಿ ಕುಡಿಯಲೂ ಸಹ ನೀರಿಲ್ಲ. ಬಚಾವತ್ ಐ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ಮಹಾರಾಷ್ಟ್ರದಿಂದ 15 ಟಿಎಂಸಿ ನೀರು ಬರಬೇಕು. ಅದರಲ್ಲಿ ಮೂರು ಟಿಎಂಸಿ ಹೊರತುಪಡಿಸಿ ಉಳಿದ 13 ಟಿಎಂಸಿ ನೀರು ನಮ್ಮ ರೈತರಿಗೆ ಬೇಕು. ಈಗ ನೋಡಿದರೆ ಕುಡಿಯುವುದಕ್ಕೂ ನೀರಿಲ್ಲ. ಸಮಸ್ಯೆ ಗಂಭೀರವಾಗಿದೆ. ಯಾವುದೇ ಕಾರಣಕ್ಕೂ ಸಮಸ್ಯೆ ಪರಿಹಾರ ಆಗುವವರೆಗೂ ಬಿಡುವುದಿಲ್ಲ, ಸಿಎಂ ಸಿದ್ದರಾಮಯ್ಯರನ್ನು ಕಂಡು ನಮ್ಮ ಪರಿಸ್ಥಿತಿ ಹೇಳುವೆ. ನದಿಗೆ ಬೇಗ ನೀರು ಹರಿಸುವಂತೆ ಪ್ರಯತ್ನ ಮಾಡುವೆ. ನಮ್ಮ ಪಾಲಿನ 15 ಟಿಎಂಸಿ ನೀರನ್ನು, ತುರ್ತಾಗಿ 5 ಟಿಎಂಸಿ ನೀರನ್ನು ಉಜನಿ ಆಣೆಕಟ್ಟೆಯಿಂದ ಬಿಡುಗಡೆ ಮಾಡಲು ಆಗ್ರಹಿಸುವೆ.- ಮಾಲೀಕಯ್ಯಾ ಗುತ್ತೇದಾರ್, ಮಾಜಿ ಸಚಿವರು, ಅಫಜಲ್ಪುರ
ಇಂದು ಅಫಜಲ್ಪುರ ಬಂದ್ ಕರೆ: ಭೀಮಾ ನದಿಗೆ 5 ಟಿಎಂಸಿ ನೀರು ಉಜನಿ ಆಣೆಕಟ್ಟೆಯಿಂದ ಹರಿಸಬೇಕು ಎಂದು ಒತ್ತಾಯಿಸಿ ಮಾ.20ರಂದು ಅಫಜಲ್ಪುರ ಪಟ್ಟಣ ಬಂದ್ ಕರೆ ನೀಡಲಾಗಿದೆ. ಇಲ್ಲಿನ ವರ್ತಕರು ಸ್ವಯಂಪ್ರೇರಿತ ನಿರ್ಣಯ ಕೈಗೊಂಡಿದ್ದಾರೆ. ಸತ್ಯಾಗ್ರಹದ ಸ್ಥಳಕ್ಕೆ ಪಕ್ಷ ಬೇಧ ಮರೆತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸರ್ವ ಸಂಘಟನೆಗಳ ಪದಾಧಿಕಾರಿಗಳು, ಮಠಾಧೀಶರು ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.