ಕಾಯಕವೇ ಲಿಂಗ ಪೂಜೆ ಸಂದೇಶ ಸಾರಿದವರು ಶರಣ ನುಲಿಯ ಚಂದಯ್ಯ-ಸಚಿವ ಎಚ್‌.ಕೆ. ಪಾಟೀಲ

| Published : Aug 10 2025, 01:31 AM IST

ಕಾಯಕವೇ ಲಿಂಗ ಪೂಜೆ ಸಂದೇಶ ಸಾರಿದವರು ಶರಣ ನುಲಿಯ ಚಂದಯ್ಯ-ಸಚಿವ ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ಶರಣ ನುಲಿಯ ಚಂದಯ್ಯನವರೂ ಒಬ್ಬರು. ಕಾಯಕವೇ ಲಿಂಗ ಪೂಜೆ ಎಂದು ಸಾರಿದ ಇವರು ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ಶರಣ ನುಲಿಯ ಚಂದಯ್ಯನವರೂ ಒಬ್ಬರು. ಕಾಯಕವೇ ಲಿಂಗ ಪೂಜೆ ಎಂದು ಸಾರಿದ ಇವರು ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಶನಿವಾರ ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನುಲಿಯ ಚಂದಯ್ಯನವರು ತಮ್ಮ ಅರ್ಥಪೂರ್ಣ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಶ್ರಮಿಸಿದ್ದಾರೆ. ಇವರ ಕಾಯಕವು ಅರಣ್ಯಕ್ಕೆ ಹೋಗಿ ಹುಲ್ಲು ತಂದು ಹಗ್ಗ ಮಾಡಿ ಮಾರುವುದು. ಹಗ್ಗ ಮಾರಿ ಬಂದ ಹಣದಿಂದ ಅವರು ದಾಸೋಹ ಕೈಗೊಳ್ಳುತ್ತಿದ್ದರು. ಕಾಯಕ ನಿಷ್ಠೆ, ಜಂಗಮ ದಾಸೋಹ ಇವರ ವಚನಗಳಲ್ಲಿ ಗಮನಾರ್ಹವಾದವುಗಳಾಗಿವೆ. ನುಲಿಯ ಚಂದಯ್ಯನವರು ಅನುಭವ ಮಂಟಪದಲ್ಲಿ ಶ್ರೇಷ್ಠ ಶರಣರಾಗಿದ್ದರು. ಕಾಯಕ ಸೇವೆಗಿಂತ ಇನ್ನೊಂದು ಸೇವೆ ಇಲ್ಲ ಎಂದು ಸಾರಿದ ನುಲಿಯ ಚಂದಯ್ಯನವರ ವಚನಗಳ ಸಂದೇಶದ ಕುರಿತು ಹೊಸ ಪೀಳಿಗೆಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ನುಲಿಯ ಚಂದಯ್ಯ ಸಮುದಾಯದವರು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಉನ್ನತ ಮಟ್ಟದ ಕ್ರೀಡಾಸೌಲಭ್ಯಗಳು ಸುಲಭವಾಗಿ ಲಭ್ಯವಾಗುವಂತೆ ಈಗಾಗಲೇ ಅಗತ್ಯಕ್ಕನುಗುಣವಾಗಿ ಕ್ರೀಡಾಂಗಣ, ಈಜುಗೊಳಗಳನ್ನು ತೆರೆಯಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಂಡು ಕ್ರಿಡಾ ಸಾಧನೆ ಇನ್ನಷ್ಟು ಮಾಡಬೇಕೆಂದು ಹೇಳಿದರು. ಜೊತೆಗೆ ಸಮಾಜದ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆ ಬಳಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸಮಾಜದ ಪ್ರಮುಖರಾದ ಮೋಹನ ಕಟ್ಟಿಮನಿ, ಎಸ್.ಎನ್. ಬಳ್ಳಾರಿ, ವಾಜಿ ಗಡಾದ, ಪರಶುರಾಮ ಕಟ್ಟಿಮನಿ, ಮೇದಾಪೂರ, ಸುರೇಶ ಕಟ್ಟಿಮನಿ, ಮೋಹನ ಭಜಂತ್ರಿ, ಲಕ್ಷ್ಮಮ ಭಜಂತ್ರಿ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದವರು ಹಾಜರಿದ್ದರು.ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ವಂದಿಸಿದರು. ಎಂ.ಸಿ. ಕಟ್ಟಿಮನಿ ಉಪನ್ಯಾಸ ನೀಡಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.ಮೆರವಣಿಗೆ: ಶರಣ ನುಲಿಯ ಚಂದಯ್ಯ ದಿನಾಚರಣೆ ಅಂಗವಾಗಿ ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ವಿವಿಧ ಕಲಾ ಪ್ರಕಾರಗಳೊಂದಿಗೆ ಅದ್ಧೂರಿಯಾಗಿ ಆರಂಭಗೊಂಡು ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು. ಮೆರವಣಿಗೆಗೆ ವಿಪ ಶಾಸಕ ಎಸ್.ವಿ. ಸಂಕನೂರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.