ಕಾಯಕಯೋಗಿ ಸಿದ್ದರಾಮರ ವಿಚಾರಗಳು ಜನಸೇವೆಗೆ ದಾರಿದೀಪ

| Published : Jan 16 2024, 01:49 AM IST

ಸಾರಾಂಶ

ಸರಳ, ಅರ್ಥಗರ್ಭಿತ ವಚನಗಳನ್ನು ರಚಿಸುವ ಮೂಲಕ ಸಮಾಜದ ತಪ್ಪುಗಳನ್ನು ತಿದ್ದಿ, ತಮ್ಮ ಕಾಯಕ ತತ್ವದ ಮೂಲಕ ಜನೋಪಯೋಗಿ ಕಾರ್ಯಗಳಿಗೆ ದಾರಿದೀಪವಾದ ಸಿದ್ದರಾಮರ ವಿಚಾರಗಳು ಇಂದಿನ ದಿನಗಳಲ್ಲಿ ಪ್ರಸ್ತುತವಾಬೇಕಿದೆ ಎಂದು ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘ ಕಾರ್ಯಾಧ್ಯಕ್ಷ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಸರಳ, ಅರ್ಥಗರ್ಭಿತ ವಚನಗಳನ್ನು ರಚಿಸುವ ಮೂಲಕ ಸಮಾಜದ ತಪ್ಪುಗಳನ್ನು ತಿದ್ದಿ, ತಮ್ಮ ಕಾಯಕ ತತ್ವದ ಮೂಲಕ ಜನೋಪಯೋಗಿ ಕಾರ್ಯಗಳಿಗೆ ದಾರಿದೀಪವಾದ ಸಿದ್ದರಾಮರ ವಿಚಾರಗಳು ಇಂದಿನ ದಿನಗಳಲ್ಲಿ ಪ್ರಸ್ತುತವಾಬೇಕಿದೆ ಎಂದು ತಾಲೂಕು ಬೋವಿ ಕ್ಷೇಮಾಭಿವೃದ್ಧಿ ಸಂಘ ಕಾರ್ಯಾಧ್ಯಕ್ಷ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪವಂದನೆ ಸಲ್ಲಿಸಿ ಅವರು ಮಾತನಾಡಿದರು.

ಸಿದ್ದರಾಮ ಶಿವಯೋಗಿಗಳ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅನುಸರಿಸಿ ಮಹಾಪುರುಷರು ನಡೆದ ದಾರಿಯಲ್ಲಿ ಸಾಗಬೇಕಿದೆ. ಸಾಕಾರರೂಪಿ ಶಿವಯೋಗಿ ಸಿದ್ದರಾಮೇಶ್ವರರ ಜೀವನ ತತ್ವಗಳು ಸರ್ವರ ಸರ್ವಾಂಗೀಣ ಪ್ರಗತಿಗೆ ಮಾರ್ಗದರ್ಶಕವಾಗಿದೆ ಎಂದರು.

ತಹಸೀಲ್ದಾರ್ ಹುಸೇನ್ ಎ. ಸರಕಾವಸ್ ಮಾತನಾಡಿ, 12-13ನೇ ಕಾಲಘಟ್ಟದ ಅಂದಿನ ದಿನಗಳಲ್ಲಿ 12 ಸಾವಿರ ಕೆರೆಗಳನ್ನು ನಿರ್ಮಿಸಿದ ಮಹಾನ್ ಕಾಯಕಯೋಗಿ ಸಿದ್ದರಾಮ ಶಿವಯೋಗಿಗಳು. ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ಆಧಾರಗಳು, ವಚನಕಾರರ ವಚನಗಳಲ್ಲಿ, ಕಾವ್ಯ ಶಾಸನಗಳಲ್ಲಿ ಮತ್ತು ಐತಿಹ್ಯಗಳಲ್ಲಿ ಕಾಣಬಹುದಾಗಿದೆ ಎಂದರು.

ತಾ.ಪಂ. ಇಒ ಡಾ.ಪ್ರದೀಪ್ ಮಾತನಾಡಿದರು. ಎಇಇ ಕಿರಣಕುಮಾರ್, ಬಿ.ಜೆ.ವಿನೋದ್, ಭೋವಿ ಸಮಾಜದ ಮುಖಂಡರಾದ ಎನ್.ಜಿ.ಶಿವಕುಮಾರ್, ಎಚ್.ಬಸವರಾಜಪ್ಪ, ಬಿ.ಕಿರಣಕುಮಾರ, ಎಂ.ಎಚ್.ಚಂದ್ರಶೇಖರ, ಓಂಕಾರಪ್ಪ ಉದ್ರಿ, ಮೇಘರಾಜ, ಅಭಿಷೇಕ್, ರಾಮಪ್ಪ ಹುರುಳಿ, ನಿಂಗಪ್ಪ ಕುನ್ನೂರು, ಪ್ರಶಾಂತ್ ಕೋವೇರ್, ಶಿವಕುಮಾರ್ ಹಿರೇಮಾಗಡಿ, ವಿನಾಯಕ ಬಿಳಗಲಿ ಮೊದಲಾದವರು ಹಾಜರಿದ್ದರು.

ಗೈರಾದ ಅಧಿಕಾರಿಗಳ ವಿರುದ್ಧ ಆಕ್ಷೇಪ:

ಜ.13ರಂದು ಎರಡನೇ ಶನಿವಾರ, ಭಾನುವಾರ ವಾರದ ರಜೆ, 14ರಂದು ಸಂಕ್ರಾಂತಿ. ಹಾಗಾಗಿ, ಶಿವಯೋಗಿ ಸಿದ್ದರಾಮ ಜಯಂತಿ ಆಚರಣೆಗೆ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗೈರು ಹಾಜರಾತಿ ಎದ್ದುಕಾಣುತ್ತಿತ್ತು. ಈ ಬಗ್ಗೆ ಭೋವಿ ಸಮಾಜದ ಮುಖಂಡರಾದ ಸುರೇಶ್ ಹಾವಣ್ಣನವರ್, ಕೆ.ಎಚ್. ಸುರೇಶ್ ಮತ್ತು ನಿಂಗಪ್ಪ ಕುನ್ನೂರು ಆಕ್ಷೇಪ ವ್ಯಕ್ತಪಡಿಸಿ, ತಾಲೂಕು ಆಡಳಿತ ನಡೆಸುವ ಕಾರ್ಯಕ್ರಮದಲ್ಲಿ 24 ಇಲಾಖೆ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕಾರ್ಯಕ್ರಮಕ್ಕೆ ಬಾರದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ತಾಲೂಕು ದಂಡಾಧಿಕಾರಿಗಳು ಅಂಥವರನ್ನು ಗುರ್ತಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅನಂತರ ಮಾತನಾಡಿದ ತಹಸೀಲ್ದಾರ್ ಹುಸೇನ್ ಸರಕಾವಸ್, ಗೈರುಹಾಜರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಸರ್ಕಾರಿ ಕಾರ್ಯಕ್ರಮಗಳು ಯಾವುದೇ ಒಂದು ಜನಾಂಗಕ್ಕೆ ಸೀಮಿತ ಆಗಿರುವುದಿಲ್ಲ. ಅಧಿಕಾರಿಗಳು ಎಲ್ಲ ಮಹನೀಯರ ಜಯಂತಿಗಳು ಸರ್ಕಾರದ ಕಾರ್ಯಕ್ರಮಗಳೇ ಆಗಿವೆ. ಇದಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕೆಂಬ ತಿಳಿವಳಿಕೆ ಹೊಂದಿರಬೇಕು ಎಂದರು.

- - - -15ಕೆಪಿಸೊರಬ01:

ಸೊರಬ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಸುರೇಶ್ ಹಾವಣ್ಣನವರ್ ಸಿದ್ದರಾಮರ ಭಾವಚಿತ್ರಕ್ಕೆ ಪುಷ್ಪವಂದನೆ ಸಲ್ಲಿಸಿದರು.