ಕೆಸಿ ವ್ಯಾಲಿ ನೀರನ್ನು ಲ್ಯಾಬ್ಗೆ ಕಳುಹಿಸಿ ಪರೀಕ್ಷಿಸಲಾಗಿದೆ. ಅದರಲ್ಲಿ ಕೃಷಿಗೆ ಯಾವುದೇ ಮಾರಕವಾಗಿಲ್ಲ ಎಂದು ವರದಿ ಬಂದಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿದ ನಂತರ ರೈತರ ಎಲ್ಲಾ ಬೆಳೆಗಳಿಗೆ ಅದು ಮಾರಕವಾಗಿ ಪರಿಣಮಿಸಿದೆ, ಯಾವುದೇ ಬೆಳೆಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡಿದರು. ಆದರೆ ವಾಸ್ತವಾಂಶ ಕೆಸಿ ವ್ಯಾಲಿ ನೀರಿಂದ ಬೆಳೆಗಳು ಹಾಳಾಗಿಲ್ಲ. ಬದಲಾಗಿ ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುವುದರಿಂದ ಮಾರಕವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದರು.ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಕಸಬಾ ರೈತ ಸಂಪರ್ಕ ಕೇಂದ್ರದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಸಿ ವ್ಯಾಲಿ ನೀರನ್ನು ಲ್ಯಾಬ್ಗೆ ಕಳುಹಿಸಿ ಪರೀಕ್ಷಿಸಲಾಗಿದೆ. ಅದರಲ್ಲಿ ಕೃಷಿಗೆ ಯಾವುದೇ ಮಾರಕವಾಗಿಲ್ಲ ಎಂದು ವರದಿ ಬಂದಿದೆ, ಬೆಳೆಗಳು ಕೊಳೆಯಲು ಮಣ್ಣಿನ ಪರೀಕ್ಷೆ ಮಾಡಿಸಿ ವೈಜ್ಙಾನಿಕವಾಗಿ ಬೆಳೆ ಮಾಡದ ಕಾರಣ ಬೆಳೆಗಳು ಕೊಳೆಯಲು ಕಾರಣವಾಗಿದೆ. ಆದ್ದರಿಂದ ರೈತರು ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದು ಯಾವ ಕಾಲಕ್ಕೆ ಯಾವ ಬೆಳೆ ಬೆಳೆದರೆ ಉತ್ತಮವೆಂದು ಅರಿತು ಮಾಡಿ ಎಂದು ಸಲಹೆ ನೀಡಿದರು.ರೈತರ ಹಿತ ರಕ್ಷಣೆಗಾಗಿ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಿಗದೆ ರೈತರು ಅಲೆದಾಡಿದರು. ನಿತ್ಯ ಗೊಬ್ಬರದ ಅಂಗಡಿಗಳ ಮುಂದೆ ಸಾಲಾಗಿ ನಿಲ್ಲುವಂತಾಗಿತ್ತು. ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಸಹ ಮಾಡಿದರು. ಆದರೆ ಸಿದ್ದರಾಮಯ್ಯ ಆಡಳಿತದಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲಿಯೂ ಗದ್ದಲ, ಗೊಂದಲಗಳಿಲ್ಲ ಎಂದರು.ಕೋಲಾರ ಜಿಲ್ಲೆಯ ಮಣ್ಣು ಇಡೀ ದೇಶದಲ್ಲಿಯೇ ಫಲವತ್ತತೆಯನ್ನು ಪಡೆದಿದ್ದು ಕೃಷಿ ಉತ್ಪನ್ನಗಳಿಗೆ ಮುಂದಿನ ದಿನಗಳಲ್ಲಿ ಡಿಮ್ಯಾಂಡ್ ಬರಲಿದೆ. ಪಟ್ಟಣದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸಲಾಗಿದೆ, ಆದರೆ ಕೃಷಿ ಮತ್ತು ತೋಟಗಾರಿಕೆ ಕಚೇರಿಗಳಿಗೆ ಇಲ್ಲ ಅದನ್ನೂ ಇಷ್ಟರಲ್ಲೆ ಈಡೇರಿಸಲಾಗುವುದು. ಕೃಷಿ ಇಲಾಖೆಗೆ ಗೋದಾಮು ನಿರ್ಮಾಣಕ್ಕೆ ದೇಶಿಹಳ್ಳಿ ಗ್ರಾಮದ ಬಳಿ 15 ಗುಂಟೆ ಜಮೀನು ನೀಡಲಾಗುವುದು. ಅಭಿವೃದ್ದಿಯೊಂದೇ ನನ್ನ ಗುರಿ ಟೀಕೆ ಮಾಡಿವವರಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡುವೆ ಅದೇ ಶಾಶ್ವತ ಎಂದರು.ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ರಾಜಾರೆಡ್ಡಿ, ಉಪಾಧ್ಯಕ್ಷ ನಾರಾಯಣಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಖಾವೀದ ನಸಿಂಕಾನಂ, ಉಪ ನಿರ್ದೇಶಕಿ ಎಂ.ಎನ್.ಮಂಜುಳ, ಸಹಾಯಕಿ ನಿರ್ದೇಶಕಿ ಪ್ರತಿಭಾ, ಪುರಸಭೆ ಮಾಜಿ ಅಧ್ಯಕ್ಷ ಗೋವಿಂದ, ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಿವಕುಮಾರಿ ಇದ್ದರು.