ಬೆಳದಿಂಗಳ ಬುತ್ತಿ ಜಾತ್ರೆಯಿಂದ ಕಲ್ಮಶ ದೂರ: ಸಿದ್ದಬಸವ ಕಬೀರ ಸ್ವಾಮಿಗಳು

| Published : Mar 29 2024, 12:48 AM IST

ಸಾರಾಂಶ

ಬೆಳದಿಂಗಳ ಬುತ್ತಿ ಜಾತ್ರೆ ಕಾರ್ಯಕ್ರಮದಿಂದ ಕಲ್ಮಶವಾದ ಮನಸ್ಸುಗಳ ದೂರ ಮಾಡಲು, ಜಾತಿ ಧರ್ಮ ಬೇಧ ಎನ್ನದೇ ಎಲ್ಲರೂ ನಮ್ಮವರೇ ಎಂಬ ಭಾವನೆ ಮೂಡಲು ಸಾಧ್ಯ.

ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ಪ್ರವಚನಕಾರ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಬೆಳದಿಂಗಳ ಬುತ್ತಿ ಜಾತ್ರೆ ಕಾರ್ಯಕ್ರಮದಿಂದ ಕಲ್ಮಶವಾದ ಮನಸ್ಸುಗಳ ದೂರ ಮಾಡಲು, ಜಾತಿ ಧರ್ಮ ಬೇಧ ಎನ್ನದೇ ಎಲ್ಲರೂ ನಮ್ಮವರೇ ಎಂಬ ಭಾವನೆ ಮೂಡಲು ಸಾಧ್ಯ ಎಂದು ಪ್ರವಚನಕಾರ ಸಿದ್ದಬಸವ ಕಬೀರ ಸ್ವಾಮಿಗಳು ಹೇಳಿದರು.

ತಾಲೂಕಿನ ನವಲಹಳ್ಳಿ ಗ್ರಾಮದ ಶ್ರೀ ಶರಣಬಸವೇಶ್ವರರ 50ನೇ ವರ್ಷದ ಪುರಾಣ ಪ್ರವಚನದ ಸುವರ್ಣ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಬೆಳದಿಂಗಳ ಬುತ್ತಿ ಜಾತ್ರೆ ಸಾಮೂಹಿಕ ಭೋಜನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಇಲ್ಲಿ ಪ್ರತಿನಿತ್ಯದ ಪುರಾಣ ಪ್ರವಚನವನ್ನು ನೀವೆಲ್ಲಾ ಕೇಳುತ್ತಿರಿ, ಆದರೆ ಆ ಪುರಾಣದ ಸನ್ನಿವೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಕುಟುಂಬ, ಸಮಾಜದ ಎಲ್ಲ ಕುಟುಂಬಗಳೊಂದಿಗೆ ಬೇಧ-ಭಾವ ಇಲ್ಲದೇ ಸುಖ ಜೀವನ ನಡೆಸಲು ಸಾಧ್ಯ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಿಂದ ಬುತ್ತಿ ಕಟ್ಟಿಕೊಂಡು ಬಂದು ದೇವಸ್ಥಾನ ಆವರಣದಲ್ಲಿ ಎಲ್ಲರೂ ಒಂದು ಕಡೆ ಸೇರಿ ಸವಿಯುವ ಊಟದಿಂದ ಮನಸ್ಸು ಶುದ್ಧವಾಗುತ್ತದೆ ಎಂದರು.

ಬೆಳದಿಂಗಳ ಬುತ್ತಿ ಜಾತ್ರೆ ವಿಶೇಷ:

ತಾಲೂಕಿನ ನವಲಹಳ್ಳಿ ಗ್ರಾಮದ ಪ್ರತಿ ಮನೆಯಿಂದ ಸಂಜೆ ಶರಣ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಮಹಿಳೆಯರು ಬುತ್ತಿ ಕಟ್ಟಿಕೊಂಡು ಬರುತ್ತಾರೆ. ಇಡೀ ಕುಟುಂಬವು ಜೊತೆಯಾಗಿ ಕುಳಿತು, ಜೊತೆಗೆ ಗ್ರಾಮದ ಎಲ್ಲ ಸಮುದಾಯವು ಸೇರಿ ಊಟ ಮಾಡುವುದು ಸಂಪ್ರದಾಯವಾಗಿದೆ. ರೊಟ್ಟಿ, ಅನ್ನ ಸಾಂಬಾರು, ಹೋಳಿಗೆ, ಸಜ್ಜಕ, ಮಾದಲಿ, ಬದನೆಕಾಯಿ ಪಲ್ಯೆ ಹೀಗೆ ವಿವಿಧ ಆಹಾರ ತಯಾರಿಸಿಕೊಂಡು ಬರುತ್ತಾರೆ. ಆ ದಿನ ಪುರಾಣ ಪ್ರವಚನ ಸ್ವಲ್ಪ ಹೇಳಿ, ನಂತರ ಸಾಮೂಹಿಕ ಭೋಜನಕ್ಕೆ ಚಾಲನೆ ನೀಡುವ ಪದ್ಧತಿ ಇದೆ. ಹೀಗೆ ಪ್ರತಿ ವರ್ಷ ಇಂತಹ ಬೆಳದಿಂಗಳ ಬುತ್ತಿ ಜಾತ್ರೆ ಆಯೋಜಿಸುವ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು ಒಗ್ಗಟ್ಟಿನಿಂದ ಸಾಮಾಜಿಕ ಕಾರ್ಯ ಮಾಡುವ ಮೂಲಕ ಎಲ್ಲ ಸಮುದಾಯಗಳೊಂದಿಗೆ ಅಣ್ಣ ತಮ್ಮಂದಿರು ಭಾವನೆಯಿಂದ ಇರುವುದು ವಿಶೇಷವಾಗಿದೆ. ಈ ಬೆಳದಿಂಗಳ ಬುತ್ತಿ ಜಾತ್ರೆಗೆ ಅಕ್ಕ ಪಕ್ಕದ ಗ್ರಾಮಗಳಾದ ಹಂಚಿನಾಳ, ನಂದಾಪೂರ, ಹುಲಿಯಾಪೂರ, ಹಿರೇಮನ್ನಾಪೂರ, ಕುಷ್ಟಗಿ, ಎಂ ಗುಡದೂರು, ಜುಮಲಾಪೂರ, ತಾವರಗೇರಾ ಭಕ್ತರು ಸಹ ಆಗಮಿಸಿ ಸಾಮೂಹಿಕ ಭೋಜನ ಸವಿಯುತ್ತಾರೆ.

ಬೆಳದಿಂಗಳ ಬುತ್ತಿ ಜಾತ್ರೆ ಕಾರ್ಯಕ್ರಮದಲ್ಲಿ ಮುರಗಯ್ಯ ಸ್ವಾಮಿ ಹಿರೇಮಠ, ಬಸವರಾಜ ಮಾಸ್ತರ, ಶರಣಯ್ಯ ಹಿರೇಮಠ, ಶಿವು ಬಡಿಗೇರ, ಪ್ರಮುಖರಾದ ಆದನಗೌಡ ಪಾಟೀಲ, ಕೆ. ಮಹೇಶ, ಯಲ್ಲಪ್ಪ ತುರ್ವಿಹಾಳ, ಅಮರೇಗೌಡ ಪಾಟೀಲ್ ವಕೀಲರು, ವಿ.ಬಿ. ಅಂಗಡಿ, ಪ್ರಸನ್ನ ದೇಸಾಯಿ, ದೊಡ್ಡನಗೌಡ ಪಾಟೀಲ, ಸಮಿತಿ ಸದಸ್ಯರು ಗ್ರಾಮಸ್ಥರು ಇದ್ದರು.