ಕೊಟ್ಟೂರು: ನಾವು ನಿತ್ಯ ಬಳಸುವ ಆಹಾರ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿವೆ. ನಿಯಮಿತ ಆಹಾರ ಹಾಗೂ ಪೌಷ್ಟಿಕಾಂಶ ಕಾಳುಗಳ ಸೇವನೆ ಮೂಲಕ ರೋಗಗಳನ್ನು ದೂರ ಇಡಬಹುದಾಗಿದ ಎಂದು ಹರಪನಹಳ್ಳಿಯ ತಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಹೇಳಿದರು.
ಪಟ್ಟಣದ ಡೋಣೂರು ಚಾನುಕೋಟಿ ಮಠದ ಸಭಾಂಗಣದಲ್ಲಿ ಹರಪನಹಳ್ಳಿಯ ಜನನಿ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸನಾತನ ಸಂಸ್ಕೃತಿ ಪ್ರಕೃತಿ ಚಿಕಿತ್ಸಾ ವಿಧಾನವನ್ನು ಜಗತ್ತಿಗೆ ಪರಿಚಯಿಸಿದೆ. ಔಷಧ ರಹಿತ ಪ್ರಕೃತಿ ಚಿಕಿತ್ಸಾ ವಿಧಾನದ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇ ಅಡ್ಡ ಪರಿಣಾಂಗಳಿಲ್ಲದ ಪ್ರಕೃತಿ ಚಿಕಿತ್ಸೆ ಇಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ. ರೋಗ ಬಂದ ನಂತರ ಆಸ್ಪತ್ರೆಗೆ ಹೋಗುವ ಬದಲು ರೋಗ ಬಾರದಂತೆ ಆಹಾರದಲ್ಲಿಯೇ ಆರೋಗ್ಯ ಕಾಪಾಡಿಕೊಳ್ಳವುದಕ್ಕೆ ಆದ್ಯತೆ ನೀಡಬೇಕು. ನಾವು ಸೇವಿಸುವ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ಅದನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿಯ ಮಹತ್ವವನ್ನು ಎಲ್ಲರಿಗೂ ತಿಳಿಸುವುದು ಅವಶ್ಯ ಎಂದರು.
ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಣಕ್ಕಿಂತ ಆರೋಗ್ಯ ಮುಖ್ಯ, ಅನಾರೋಗ್ಯ ಪೀಡಿತರಾದಾಗ ಹಣವೂ ಕೆಲಸಕ್ಕೆ ಬರುವುದಿಲ್ಲ. ಹಣದಿಂದ ಎಂದಿಗೂ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ಅಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ತಂತ್ರಜ್ಞಾನಗಳು ಬಂದಿದ್ದರೂ, ಭಾರತೀಯ ಸನಾತನ ವೈದ್ಯ ಪದ್ಧತಿಗೆ ಅದರದ್ದೇ ಮಹತ್ವ ಹೊಂದಿದೆ ಎಂದು ಹೇಳಿದರು.ಜನನಿ ಆಸ್ಪತ್ರೆ ನಿರ್ದೇಶಕ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ಲು, ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ ಮುಖ್ಯಸ್ಥ ಉದಯಶಂಖರ್, ಕರಿಬಸವನಗೌಡ, ಡಾ.ಕೆ.ವಿಜಯಕುಮಾರ್ ಮಾತನಾಡಿದರು.