ನಮ್ಮ ಜಲಮೂಲಗಳಾದ ಕೆರೆ, ಕಾಲುವೆ, ಕಟ್ಟೆ, ನದಿಗಳಿಗೆ ಈರುಳ್ಳಿ ಸಿಪ್ಪೆ, ಕೋಳಿ ತ್ಯಾಜ್ಯ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಹಾಕಿ ನೀರನ್ನು ಮಲೀನಗೊಳಿಸಬಾರದು. ಜಲಚರ ಪ್ರಾಣಿಗಳು ಮಲೀನ ನೀರು ಕುಡಿದು ಸಾವನ್ನಪ್ಪಲಿವೆ. ಹೀಗಾಗಿ ನೀರನ್ನು ಅಶುದ್ಧಗೊಳಿಸಬಾರದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ದಿನನಿತ್ಯ ನಮ್ಮ ದೇಹವನ್ನು ಸ್ವಚ್ಛಗೊಳಿಸುವಂತೆಯೇ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ, ಪುರಸಭೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಿಸಿಕೊಳ್ಳದಿದ್ದರೆ ವೈರಾಣು, ರೋಗಾಣುಗಳು, ಕ್ರಿಮಿಕೀಟಗಳಿಂದ ನಮಗೆ ರೋಗ ಹಾಗೂ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.
ನಮ್ಮ ಜಲಮೂಲಗಳಾದ ಕೆರೆ, ಕಾಲುವೆ, ಕಟ್ಟೆ, ನದಿಗಳಿಗೆ ಈರುಳ್ಳಿ ಸಿಪ್ಪೆ, ಕೋಳಿ ತ್ಯಾಜ್ಯ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಹಾಕಿ ನೀರನ್ನು ಮಲೀನಗೊಳಿಸಬಾರದು. ಜಲಚರ ಪ್ರಾಣಿಗಳು ಮಲೀನ ನೀರು ಕುಡಿದು ಸಾವನ್ನಪ್ಪಲಿವೆ. ಹೀಗಾಗಿ ನೀರನ್ನು ಅಶುದ್ಧಗೊಳಿಸಬಾರದು ಎಂದರು.ಮಹಾತ್ಮಾಗಾಂಧಿ ಅವರು ಸ್ವಚ್ಛತೆಯೇ ದೇವರು ಎಂದು ಹೇಳಿದ್ದಾರೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ದೇಶದ ಅಭ್ಯುದಯಕ್ಕೆ ಸಹಕರಿಸಬೇಕು ಎಂದರು.
ಸ್ವಚ್ಚತೆ ಎನ್ನುವುದು ನಿರಂತರವಾಗಿರಬೇಕು. ಕೇವಲ ಭಾಷಣ ಅಥವಾ ಒಂದು ದಿನಕ್ಕೆ ಅದು ಸೀಮಿತವಾಗಬಾರದು. ಹೀಗಾಗಿ ಪರಿಸರದ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೂ ನೀಡಬೇಕಾದ ಜವಾವ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದರು.ಈ ವೇಳೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ಖಜಾಂಚಿ ಪುಷ್ಪಾ, ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್, ಸಿಬ್ಬಂದಿ ಮಧು, ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.