ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಒಂದು ಕಡೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿ ಎಳೆಯುತ್ತಿದ್ದಾರೆ. ಮತ್ತೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಕುರ್ಚಿ ಬಗ್ಗೆ ಮಾತನಾಡುತ್ತಿದ್ದಾರೆ. ಎಸ್.ಎಂ.ಕೃಷ್ಣ ಬದುಕಿದ್ದಾಗಲೇ ಈ ಮಾತನ್ನು ಹೇಳಬೇಕಿತ್ತು. ಈಗ ಆ ಮಾತನ್ನು ಹೇಳಿದರೆ ಎಸ್.ಎಂ.ಕೃಷ್ಣ ಅವರಿಗೆ ಅವಮಾನ ಮಾಡಿದ ಹಾಗೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲಿನ ಕೋಪಕ್ಕೆ ಖರ್ಗೆ ಈ ರೀತಿ ಹೇಳಿದ್ದಾರೆ. ಈಗಲಾದರೂ ಆ ಚೇರ್ ಮೇಲೆ ನನ್ನ ಕೂರಿಸಿ ಅಂತ ಹೇಳಿರೋದು. ಖರ್ಗೆಯವರು ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ. ಈ ಹಿಂದೆಯೂ ಇದೆ ರೀತಿ ಆಗಿರೋದು. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಆಗಬಹುದು. ಸಿದ್ದರಾಮಯ್ಯ-ಡಿಕೆಶಿ ನಡುವೆ ಒಪ್ಪಂದ ಆಗಿರೋದು ನೂರಕ್ಕೆ ನೂರು ಸತ್ಯ. ಅಕ್ಟೊಬರ್ನಲ್ಲಿ ಕ್ರಾಂತಿ ಆಗೇ ಆಗುತ್ತೆ ಎಂದರು.
ಡಿಕೆಶಿ ವರ ಕೊಡೋ ದೇವರನ್ನು ಹುಡುಕಿಕೊಂಡು ಹೋಗ್ತಿದ್ದಾರೆ. ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಅಂತ ಸಿಎಂ ಹೇಳಿದ್ದರು. ಡಿ.ಕೆ. ಶಿವಕುಮಾರ್ಗೆ ಕಂಟಕ ಇರೋದು ಜೆಡಿಎಸ್ನಿಂದ ಬಂದೋರಿಂದ ಎಂದರು. ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದವರು ಡಿ.ಕೆ.ಶಿವಕುಮಾರ್ ಎಂದು ಹೇಳಿದರು.ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಸಿಎಂ ಆಹ್ವಾನ ವಿಚಾರು ಕುರಿತ ಪ್ರತಿಕ್ರಿಯೆ ನೀಡಿದ ಅಶೋಕ್, ಅಸೆಂಬ್ಲಿಯಲ್ಲಿ ಒಂದು ದಿನಾನೂ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಮಾತನಾಡಿಲ್ಲ. ಅನೇಕ ಶಾಸಕರು ಅಭಿವೃದ್ಧಿ ಆಗಿಲ್ಲ ಅಂತ ಹೇಳ್ತಿದ್ದಾರೆ. ನಿಮ್ಮ ಸಾಧನೆ ಏನಾದರು ಇದ್ದರೆ ವಿಧಾನಸೌಧದಲ್ಲಿ ಬಂದು ಹೇಳಿ. ಏನು ಕಡಿದು ಕಟ್ಟಿ ಹಾಕಿದ್ದೀರಾ ಹೇಳಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಕಟ್ಟಿರುವ ಒಂದೇ ಒಂದು ಕೆರೆ ತೋರಿಸಿ. ಕೆರೆ ಕಟ್ಟುವ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ. ಇಂತವರು ನಾಲ್ವಡಿ ಬಗ್ಗೆ ಮಾತನಾಡ್ತಾರೆ. ಹೋಲಿಕೆ ಮಾಡಿಕೊಳ್ಳೋದಾದರೆ ನೆಹರು, ಗಾಂಧೀಜಿಗೆ ಹೋಲಿಕೆ ಮಾಡಿಕೊಳ್ಳಿ ಎಂದರು.