ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಹುಲಿಕುಂಟೆ ಸುತ್ತಮುತ್ತಲಿನ ಗ್ರಾಮಗಳ 1,012 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅಧ್ಯಕ್ಷತೆಯಲ್ಲಿ ಭೂ ಪರಿಹಾರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹುಲಿಕುಂಟೆ ಭಾಗದ ರೈತರು, ಈಗಾಗಲೇ ಹುಲಿಕುಂಟೆ ಸುತ್ತಮುತ್ತ ಕೆಐಎಡಿಬಿ ಸುಮಾರು 450 ಎಕರೆ ಭೂಸ್ವಾಧೀನ ಮಾಡಿಕೊಂಡಿದೆ. ಹಾಗಾಗಿ ಮತ್ತೆ ನಮ್ಮ ಗ್ರಾಮದ ಸುತ್ತಲಿನ ಫಲವತ್ತಾದ ಕೃಷಿ ಭೂಮಿಯನ್ನೇ ಸ್ವಾಧೀನ ಮಾಡಿಕೊಳ್ಳುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧ ಇದೆ. ಈ ಬಗ್ಗೆ ಹೋರಾಟಗಳನ್ನು ರೂಪಿಸಲಾಗುವುದು ಎಂದು ರೈತರು ಹೇಳಿದರು.ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿ, ದೇಶದ ಪ್ರಗತಿಗೆ ಕೃಷಿ, ಕೈಗಾರಿಕೆ ಎರಡೂ ಸಹ ಮುಖ್ಯವಾಗಿವೆ. ದೇವನಹಳ್ಳಿ ಸಮೀಪ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಈ ಭಾಗದ ತಾಲೂಕುಗಳಲ್ಲೇ ಕೈಗಾರಿಕೆಗಳ ಸ್ಥಾಪನೆಗೆ ಸ್ಥಳ ನೀಡುವಂತೆ ಕೈಗಾರಿಕೋದ್ಯಮಿಗಳ ಬೇಡಿಕೆಯಾಗಿದೆ. ಅಲ್ಲದೆ ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ವಿದ್ಯಾವಂತ ಯುವ ಸಮೂಹಕ್ಕೂ ಅವರ ಅರ್ಹತೆಗೆ ತಕ್ಕಂತೆ ಉನ್ನತ ಉದ್ಯೋಗಗಳು ದೊರೆಯಲಿವೆ ಎಂದರು.
ಹುಲಿಕುಂಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ವರ್ಷಗಳಿಂದ ಮಾರಾಟವಾಗಿರುವ ಜಮೀನುಗಳ ಬೆಲೆ, ಸರ್ಕಾರದ ಮಾರ್ಗಸೂಚಿ ಬೆಲೆ ಹಾಗೂ ಪ್ರಸ್ತುತ ಮಾರುಕಟ್ಟೆ ಬೆಲೆ ಈ ಎಲ್ಲವನ್ನು ಆಧಾರವಾಗಿಟ್ಟುಕೊಂಡು ಹುಲಿಕುಂಟೆ ರಸ್ತೆ ಭಾಗದಲ್ಲಿನ ಒಂದು ಎಕರೆ ಜಮೀನಿಗೆ ₹2.75 ಕೋಟಿ, ರಸ್ತೆಯಿಂದ ಹಿಂದಕ್ಕೆ ಇರುವ ಒಂದು ಎಕರೆ ಜಮೀನಿಗೆ ₹1.55 ಕೋಟಿ ಹಾಗೂ ದೊಡ್ಡಮಂಕಲಾಳ ಗ್ರಾಮದ ಒಂದು ಎಕರೆ ಜಮೀನಿಗೆ ₹1.25 ಕೋಟಿ ಭೂ ಪರಿಹಾರ ನಿಗದಿ ಮಾಡಲಾಗಿದೆ. ಈ ಬಗ್ಗೆ ರೈತರಿಗೆ ಅಸಮಾಧಾನ ಇದ್ದರೆ ಕೆಐಎಡಿಬಿ ಮುಂದೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.ಸಭೆಯಲ್ಲಿ ಕೆಐಎಡಿಬಿ ಭೂಸ್ವಾಧೀನ ಅಧಿಕಾರಿ ಬಾಳಪ್ಪ ಇದ್ದರು.
ಫೋಟೋ-18ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಸುತ್ತಮುತ್ತಲಿನ ಗ್ರಾಮಗಳ 1,012 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಭೂ ಪರಿಹಾರ ಸಭೆ ನಡೆಯಿತು.