ಸಾರಾಂಶ
ಹಾವೇರಿ: ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಸರ್ಕಾರ ಮೊದಲು ಒದ್ದು ಹೊರಗೆ ಹಾಕಬೇಕು. ಕನ್ನಡಿಗರಿಗೆ ಅವಮಾನ ಮಾಡುವವರ ಮೇಲೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಿಟ್ಟವಾಗಿ ಕನ್ನಡ ಮಾತನಾಡುತ್ತೇನೆ ಎಂದ ಕಂಡಕ್ಟರ್ಗೆ ಅಭಿನಂದನೆ. ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಒದ್ದು ಹೊರಗೆ ಹಾಕಬೇಕು. ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ನ್ನು ಕೂಡಲೇ ಹಿಂಪಡೆಯಬೇಕು. ಈ ಘಟನೆಯ ಬಗ್ಗೆ ಮಂತ್ರಿಗಳು ಮೃದುವಾಗಿ ಮಾತನಾಡುತ್ತಾರೆ. ಮಂತ್ರಿಗಳು ಎಲ್ಲೋ ಮರಾಠಿ ಮಾತನಾಡುವವರ ಮುಲಾಜಿಗೆ ಬಿದ್ದಿದ್ದಾರೆ. ಕನ್ನಡ ಚಳವಳಿಗಾರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಕೂಡಲೇ ರಾಜ್ಯ ಸರ್ಕಾರ, ಮಹಾರಾಷ್ಟ್ರ ಸರ್ಕಾರದ ಜತೆ ಮಾತನಾಡಬೇಕು. ಪುಂಡರಿಗೆ ಎಚ್ಚರಿಕೆ ಕೊಡಬೇಕು. ಕನ್ನಡಿಗರಿಗೆ ಅವಮಾನ ಮಾಡುವವರ ಮೇಲೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಇಲ್ಲಿಯ ಅನ್ನ ತಿಂದು, ನೀರು ಕುಡಿದು ನಾಲಾಯಕ್ ಅನ್ನುವ ಪದ ಬಳಕೆ ಮಾಡುವುದು ಸರಿಯಲ್ಲ. ಕೂಡಲೇ ಇಂಥವರನ್ನು ಗಡಿಪಾರು ಮಾಡಬೇಕು. ಹಿಂದೆ ನಮ್ಮ ಸರ್ಕಾರ ಇದ್ದಾಗ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಆಗ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು ಎಂದರು.ಎಸ್ಸಿಪಿ, ಟಿಎಸ್ಪಿ ಹಣ ಬೇರೆ ಉದ್ದೇಶಕ್ಕೆ ಬಳಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರ ಎಸ್ಸಿ ಎಸ್ಟಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಎಸ್ಸಿಪಿ, ಟಿಎಸ್ಪಿ ಹಣವನ್ನೆ ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಮೊದಲು ಅಂತಹ ಸಮಾಜಗಳಿಗೆ ಹಣ ಬಿಡುಗಡೆ ಮಾಡಲಿ. ಎಸ್ಸಿಎಸ್ಟಿ ನಿಗಮಗಳಿಗೆ ಮೊದಲೇ ಕಡಿಮೆ ಹಣ ನಿಗದಿ ಮಾಡಿದ್ದಾರೆ. ಅದರಲ್ಲಿ ಈವರೆಗೆ ಕೇವಲ ಶೇ. 25ರಷ್ಟು ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.ಅರಳೇಶ್ವರ ಶಾಲೆ ಎಸ್ಡಿಎಂಸಿಗೆ ಆಯ್ಕೆ
ಹಾನಗಲ್ಲ: ತಾಲೂಕಿನ ಅರಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಆಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ವಿದ್ಯಾ ನಾಗರಾಜ ಡಂಬಳಪ್ಪನವರ, ಉಪಾಧ್ಯಕ್ಷರಾಗಿ ಗಿರೀಶ ತವರಿ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ಮಲ್ಲೇಶ ಜಾವೋಜಿ, ಪ್ರವೀಣ ತುಮರಿಕೊಪ್ಪ, ದೇವಿಂದ್ರಪ್ಪ ಶಿವಪೂರ, ಮಹಬೂಬಲಿ ಹಿತ್ತಲಮನಿ, ಅರುಣಕುಮಾರ ತಿರುಮಲೆ, ಶಿವಯೋಗಿ ಸಂಗೂರ, ಚನ್ನಪ್ಪ ಅಂಗಡಿ, ಶಿವಕುಮಾರ ಬಾರ್ಕಿ, ಶೃತಿ ಜಾವೋಜಿ, ಸುಶೀಲಾ ಹಳ್ಳದ, ಪ್ರಿಯಾಂಕ ನಿಗಟೆ, ಕಾವ್ಯಾ ಲೇಖಿ, ಯಶೋಧಾ ದೊಡ್ಡಗೌಡರ, ರೇಖಾ ಚಿಕ್ಕೇರಿ, ಶಂಕ್ರಮ್ಮ ಕಲಗೌಡರ ಆಯ್ಕೆಯಾಗಿದ್ದಾರೆ.