1997ರಲ್ಲಿ ಹಾಸನ ವಿಮಾನ ನಿಲ್ದಾಣಕ್ಕಾಗಿ ಕೆಐಡಿಬಿ ಭೂಸ್ವಾಧೀನ ನಡೆಸಿ, ರೈತರು ಸ್ವಾಧೀನದಲ್ಲಿದ್ದ ಭೂಮಿಯ ಒಂದು ಭಾಗವನ್ನು ಪಡೆದು ಪರಿಹಾರ ನೀಡಿತ್ತು. ಆದರೆ ಉಳಿದ ಭೂಮಿಯನ್ನು ರೈತರು ಇಂದಿಗೂ ಕೃಷಿಗೆ ಬಳಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಉಳಿಕೆ ಭೂಮಿಯನ್ನೂ ತಮ್ಮದಾಗಿಸಿಕೊಳ್ಳಲು ಕೆಐಡಿಬಿ ಬಲವಂತದ ಕ್ರಮಕ್ಕೆ ಮುಂದಾಗಿದ್ದು, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಶೇ.50ರಷ್ಟು ಹಣ ಪಾವತಿಸಿ ವರ್ಗಾಯಿಸಿಕೊಂಡಿದ್ದ 12 ಎಕರೆ 22 ಗುಂಟೆ ಭೂಮಿಯನ್ನು ಹಿಂಪಡೆದು, ಹೊಸದಾಗಿ ನಿಯಮಾನುಸಾರ ಭೂಸ್ವಾಧೀನ ಮಾಡಿ ಖಾತೆದಾರರಿಗೆ ಪರಿಹಾರ ಪಾವತಿಸಲು ನಿರ್ದೇಶನ ಕೋರಿ ಪತ್ರ ಬರೆದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷಿ÷್ಮಸಾಗರ ಗ್ರಾಮದ ಸರ್ವೆ ನಂಬರ್‌ 35ರಲ್ಲಿ ರೈತರು ಕಾನೂನುಬದ್ಧವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಕೃಷಿ ಭೂಮಿಯನ್ನು ಪರಿಹಾರ ನೀಡದೇ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಸನ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್‌. ನವೀನ್ ಕುಮಾರ್‌ ಮಾಧ್ಯಮದೊಂದಿಗೆ ಮಾತನಾಡಿ, 1985ರಲ್ಲಿ ಸರ್ಕಾರವು 26 ರೈತ ಕುಟುಂಬಗಳಿಗೆ ತಲಾ 0.26ಎಕರೆ ಕೃಷಿ ಭೂಮಿಯನ್ನು ಮಂಜೂರು ಮಾಡಿ ಹಕ್ಕುಪತ್ರ ನೀಡಿತ್ತು. ಅಂದಿನಿಂದಲೂ ಈ ಕುಟುಂಬಗಳು ನಿರಂತರವಾಗಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬೆಳೆ ಬೆಳೆಸುತ್ತಿದ್ದು, ಪಹಣಿಗಳಲ್ಲಿಯೂ ಅವರ ಹೆಸರುಗಳು ದಾಖಲಾಗಿವೆ. 1997ರಲ್ಲಿ ಹಾಸನ ವಿಮಾನ ನಿಲ್ದಾಣಕ್ಕಾಗಿ ಕೆಐಡಿಬಿ ಭೂಸ್ವಾಧೀನ ನಡೆಸಿ, ರೈತರು ಸ್ವಾಧೀನದಲ್ಲಿದ್ದ ಭೂಮಿಯ ಒಂದು ಭಾಗವನ್ನು ಪಡೆದು ಪರಿಹಾರ ನೀಡಿತ್ತು. ಆದರೆ ಉಳಿದ ಭೂಮಿಯನ್ನು ರೈತರು ಇಂದಿಗೂ ಕೃಷಿಗೆ ಬಳಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಉಳಿಕೆ ಭೂಮಿಯನ್ನೂ ತಮ್ಮದಾಗಿಸಿಕೊಳ್ಳಲು ಕೆಐಡಿಬಿ ಬಲವಂತದ ಕ್ರಮಕ್ಕೆ ಮುಂದಾಗಿದ್ದು, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಮಧ್ಯೆ ಕೆಐಡಿಬಿಯೇ 2024 ರ ಡಿಸೆಂಬರ್ 20 ರಂದು ಕೇಂದ್ರ ಕಚೇರಿಗೆ ಪತ್ರ ಬರೆದು, ಶೇ.50ರಷ್ಟು ಹಣ ಪಾವತಿಸಿ ವರ್ಗಾಯಿಸಿಕೊಂಡಿದ್ದ 12 ಎಕರೆ 22 ಗುಂಟೆ ಭೂಮಿಯನ್ನು ಹಿಂಪಡೆದು, ಹೊಸದಾಗಿ ನಿಯಮಾನುಸಾರ ಭೂಸ್ವಾಧೀನ ಮಾಡಿ ಖಾತೆದಾರರಿಗೆ ಪರಿಹಾರ ಪಾವತಿಸಲು ನಿರ್ದೇಶನ ಕೋರಿ ಪತ್ರ ಬರೆದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಈ ನಡುವೆ ಕೆಐಡಿಬಿಯ ವಿಳಂಬ ನೀತಿಯಿಂದ ಪ್ರೇರಿತರಾದ ಬುವನಹಳ್ಳಿ ಗ್ರಾಮದ ಗೌಡಯ್ಯ, ಶಿವರಾಮು ಸೇರಿದಂತೆ ಕೆಲವರು ಅಕ್ರಮವಾಗಿ ರೈತರು ಸಾಗುವಳಿ ಮಾಡುತ್ತಿದ್ದ ಕೃಷಿಭೂಮಿಯನ್ನು ಅಗೆದು ನಾಶಪಡಿಸುತ್ತಿದ್ದು, ಮಣ್ಣನ್ನು ಸರ್ವೆ ನಂಬರ್ 35 ರಲ್ಲಿರುವ ಚಿಕ್ಕಟ್ಟೆ ಕೆರೆಯ ಜಾಗದಲ್ಲಿ ಹಾಕಿ ಮುಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ರೈತ ಸಂಘ ಗಂಭೀರ ಆರೋಪ ಮಾಡಿದೆ. ಅಲ್ಲದೆ ಖಾಲಿ ಇರುವ ಸರ್ಕಾರಿ ಭೂಮಿಯನ್ನೂ ಅಕ್ರಮವಾಗಿ ಕಬಳಿಸಲು ಯತ್ನ ನಡೆಯುತ್ತಿದೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಅಕ್ರಮ ಒತ್ತುವರಿಯನ್ನು ತಡೆಯಬೇಕು, ರೈತರು ಅನುಭವದಲ್ಲಿರುವ ಉಳಿಕೆ ಭೂಮಿಯನ್ನು ಕಾನೂನುಬದ್ಧವಾಗಿ ದುರಸ್ತು ಮಾಡಿಸಬೇಕು ಹಾಗೂ ಇಂದಿನ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಮಾನ ನಿಲ್ದಾಣಕ್ಕಾಗಿ ಕೃಷಿಭೂಮಿ ಕಳೆದುಕೊಂಡ ರೈತರು ನಿರ್ಗತಿಕ ಸ್ಥಿತಿಗೆ ತಲುಪಿರುವುದರಿಂದ, ಪರ್ಯಾಯವಾಗಿ ಸರ್ವೆ ನಂಬರ್ 35ರಲ್ಲಿರುವ ಉಳಿಕೆ ಸರ್ಕಾರಿ ಭೂಮಿಯನ್ನು ಭೂಮಿ ಕಳೆದುಕೊಂಡ ಬಡ ರೈತರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಗ್ರಾಮ ಘಟಕ ಅಧ್ಯಕ್ಷ ಮೂರ್ತಿ ಎಂ.ಬಿ, ಗ್ರಾಮ ಘಟಕ ಕಾರ್ಯದರ್ಶಿ ಜಯಲಕ್ಷ್ಮೀ ,ಭಾರತಿ , ಸುಮಿತ್ರ, ರತ್ನಮ್ಮ, ಯಮುನಾಶ್ರೀ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.