ಸಾರಾಂಶ
ಪೊಲೀಸ್ ತನಿಖೆ ಪರಿಣಾಮಕಾರಿ ನಡೆಸಬೇಕು, ಆರೋಪಿತರ ಬಂಧನ ಶೀಘ್ರ ನಡೆಸಬೇಕು ಎಂದು ನಿಯೋಗ ಆಗ್ರಹಿಸಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ ಇಲ್ಲಿನ ಹನೆಹಳ್ಳಿಯ ದಲಿತ ಯುವಕ ಕೃಷ್ಣ ಎಂಬವರನ್ನು ಗುಂಡು ಹಾರಿಸಿ ಕೊಲೆ ಮಾಡಲಾದ ಸ್ಥಳಕ್ಕೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ನಿಯೋಗ ಭೇಟಿ ನೀಡಿ ಪರಿಶೀಲಿಸಿತು.
ಈ ಅಮಾಯಕ ದಲಿತ ಯುವಕನ ಅಮಾನವೀಯ ಹತ್ಯೆಯ ಬಗ್ಗೆ ಸ್ಥಳೀಯ ಜನರು ಖೇದ ಮತ್ತು ಆತಂಕ ವ್ಯಕ್ತಪಡಿಸಿದರು. ನಂತರ ನಿಯೋಗ ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ರನ್ನು ಭೇಟಿ ಮಾಡಿ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಿತು.ಪೊಲೀಸ್ ತನಿಖೆ ಇನ್ನೂ ಪರಿಣಾಮಕಾರಿಯಾಗಿ ನಡೆಸಬೇಕೆಂದೂ, ಕೃತ್ಯ ನಡೆಸಿದ ಆರೋಪಿತರ ಬಂಧನ ಶೀಘ್ರ ನಡೆಸಬೇಕೆಂದು ತನಿಖಾಧಿಕಾರಿಯವರಲ್ಲಿ ನಿಯೋಗವು ಆಗ್ರಹಿಸಿತು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟ ರೂಪಿಸುವುದಾಗಿಯೂ ತಿಳಿಸಲಾಯಿತು.
ನಿಯೋಗದಲ್ಲಿ ದಲಿತ ಚಳವಳಿಯ ನಾಯಕರಾದ ಸುಂದರ್ ಮಾಸ್ತರ್, ಶಾಮರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ವಿಶ್ವನಾಥ ಬೆಳ್ಳಂಪಳ್ಳಿ, ಶಾಮಸುಂದರ್ ತೆಕ್ಕಟ್ಟೆ, ಕೆ.ಸಿ.ರಾಜು ಬೆಟ್ಟಿನಮನೆ, ಶ್ರೀನಿವಾಸ ವಡ್ಡರ್ಸೆ, ಭಾಸ್ಕರ ಮಾಸ್ತರ್, ಕುಮಾರ್ ಕೋಟ, ಶಾಂತಿ ರಾಜ್ ಬಾರ್ಕೂರ್, ಮಂಜುನಾಥ ಬಾಳ್ಕುದ್ರು, ಪ್ರಶಾಂತ್ ಬಿರ್ತಿ, ಕುಸುಮ ಮಂಜುನಾಥ್, ಗೋಪಾಲ್ ಕೊಡಂಕೂರ್ ಮತ್ತು ಹತ್ಯೆಗೊಳಗಾದ ಕೃಷ್ಣನ ಸಮೀಪದ ಬಂಧುಗಳು ಇದ್ದರು.