ಕಿತ್ತೂರು ರಾಣಿ ಚೆನ್ನಮ್ಮ ಜೀವನ ಸಾಧನೆ ಶ್ಲಾಘನೀಯ: ಗಣ್ಯರ ಅಭಿಮತ

| Published : Oct 27 2025, 12:30 AM IST

ಕಿತ್ತೂರು ರಾಣಿ ಚೆನ್ನಮ್ಮ ಜೀವನ ಸಾಧನೆ ಶ್ಲಾಘನೀಯ: ಗಣ್ಯರ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಧೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಪ್ರತಿಯೊಬ್ಬರಿಗೂ ಮಾದರಿ ಎಂದು ಕೆ . ಆರ್‌. ಬಿಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಪ್ರತಿಯೊಬ್ಬರಿಗೂ ಮಾದರಿ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಕೆ.ಆರ್.ಬಿಂದು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಾಲ್ಯದಲ್ಲಿಯೇ ಕತ್ತಿ ವರಸೆ, ಬಿಲ್ಲುಗಾರಿಕೆ, ಕುದುರೆ ಸವಾರಿ ಕಲಿತಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರು 1857 ರ ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದು ತಿಳಿಸಿದರು. ‘ಕಪ್ಪ ಕೊಡಬೇಕೆ, ಕಪ್ಪ? ಕೊಡಬೇಕೆ? ನಿಮಗೇಕೆ ಕೊಡಬೇಕು ಕಪ್ಪ? ನೀವು ಏನು ಒಡಹುಟ್ಟಿದವರೆ, ನೆಂಟರೆ, ಬಂಧುಗಳೇ, ನೀವೇನು ಇಲ್ಲಿ ಉತ್ತಿರ, ಬಿತ್ತಿರ.. ರೈತರು ಕೃಷಿಕರು ಈ ಕೆಲಸ ಮಾಡುತ್ತಾರೆ. ಕಬ್ಬು ತಿನ್ನಲು ಬಿಟ್ಟ ತಪ್ಪಿಗೆ ಕೂಲಿ ಕೊಡಬೇಕಾ, ಕಿತ್ತೂರು ಕಟ್ಟಿ ಬೆಳೆಸಿದ ಆಸ್ತಿ ಏನು, ನಿಮಗೇನು ಇದೆ ಕಪ್ಪ ಕೇಳಲು, ನಾವೇಕೆ ಕೊಡಬೇಕು ನಿಮಗೆ ಕಪ್ಪ ? ಎಂದು ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರು ಕೆಂಡಕಾರಿದ್ದರು ಎಂದು ಕೆ.ಆರ್.ಬಿಂದು ಅವರು ತಿಳಿಸಿದರು. ರಾಜ್ಯದ ಜನಪದ ನಾಯಕಿಯಾಗಿ ಧೈರ್ಯ ಮತ್ತು ದೇಶ ಪ್ರೇಮಕ್ಕೆ ಉದಾಹರಣೆಯಾದ ಚೆನ್ನಮ್ಮ ಕರ್ನಾಟಕದ ವೀರ ವನಿತೆ ನಾರಿ ಶಕ್ತಿಯ ಸಂಕೇತ ಎಂದು ಕೆ.ಆರ್.ಬಿಂದು ಅವರು ವಿವರಿಸಿದರು. ಕಠಿಣ ಪರಿಸ್ಥಿತಿಯಲ್ಲಿಯೂ ಹೋರಾಡಿ ಸ್ಫೂರ್ತಿಯನ್ನು ಕಿತ್ತೂರು ರಾಣಿ ಚೆನ್ನಮ್ಮ ಅವರು ತೋರಿದ್ದರು. ರಾಣಿ ಲಕ್ಷ್ಮಿಬಾಯಿಗಿಂತ ಮೊದಲು 1824 ರಲ್ಲಿ ರಾಜ್ಯದ ಒಂದು ಸಂಸ್ಥಾನದ ರಾಣಿ ಚೆನ್ನಮ್ಮ ನಡೆಸಿದ ಹೋರಾಟ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಆಗಿದೆ ಎಂದು ತಿಳಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಭಕ್ತಿ, ರಾಷ್ಟ್ರ ಪ್ರೇಮ ಮೆಚ್ಚುವಂತದ್ದು, ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಡಿದ್ದಾರೆ ಎಂದರು.ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಸಾಕಷ್ಟು ಬದಲಾವಣೆಗಳು ಆಗಿದ್ದು, ಆ ನಿಟ್ಟಿನಲ್ಲಿ ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು ಮತ್ತು ಪಾಲಿಸಬೇಕು. ಪ್ರಶ್ನೆ ಮಾಡುವ ಮನೋಭಾವ ಎಲ್ಲರಲ್ಲಿಯೂ ಇರಬೇಕು ಎಂದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಅವರಿಗಿದ್ದ ದೇಶ ಭಕ್ತಿ, ಸಾಹಸ ಪ್ರಜ್ಞೆ ಮೆಚ್ಚುವಂತದ್ದು, ರಾಣಿ ಚೆನ್ನಮ್ಮ ಅವರ ತ್ಯಾಗ ಬಲಿದಾನವನ್ನು ಸದಾ ಸ್ಮರಿಸಬೇಕು ಎಂದರು. ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ಧರಾಜು ಬೆಳ್ಳಯ್ಯ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜಾಗೃತಿ ಮೂಡಿಸಿದರು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಉದ್ದೇಶ ಇರಬೇಕು ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿದರು. ಶಿಕ್ಷಕಿ ರಕ್ಷಿತ, ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.