ಮನುಷ್ಯ ಜನ್ಮ ಪಡೆದಿರುವುದು ಕೇವಲ ಭೌತಿಕ ಬದುಕಿಗಾಗಿ ಅಲ್ಲ, ಅರಿವಿನ ಜನ್ಮಕ್ಕಾಗಿ ನಾವು ಸತ್ಯ ಮತ್ತು ಮಿಥ್ಯೆಯ ನಡುವಿನ ವ್ಯತ್ಯಾಸ ಅರಿತು, ಜೀವನದ ನಿಜವಾದ ಅರ್ಥ ತಿಳಿದುಕೊಳ್ಳಬೇಕು

ಹನುಮಸಾಗರ: ಮನುಷ್ಯ ಜೀವನದ ಉದ್ದೇಶ ಅರಿತು ಸನ್ಮಾರ್ಗದಲ್ಲಿ ನಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಸಿದ್ದಾರೂಮಠದ ಸಿದ್ದಯ್ಯಜ್ಜ ಸ್ವಾಮಿಗಳು ಹೇಳಿದರು.

ಸಮೀಪದ ಹಿರೇಗೊಣ್ಣಾಗರ ಗ್ರಾಮದಲ್ಲಿ ಗುರುವಾರ ಬಸವಾನಂದ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಭೌತಿಕ ಜೀವನದ ಜತೆಗೆ ಆಧ್ಯಾತ್ಮಿಕ ಚಿಂತನೆಗೆ ಆದ್ಯತೆ ನೀಡಿದಾಗ ಮನುಷ್ಯನ ಬದುಕು ಸಾರ್ಥಕವಾಗುತ್ತದೆ ಎಂದರು.

ಆಧ್ಯಾತ್ಮಿಕ ಚಿಂತಕ ಪ್ರದೀಪ ಮಾತನಾಡಿ, ಮನುಷ್ಯ ಜನ್ಮ ಪಡೆದಿರುವುದು ಕೇವಲ ಭೌತಿಕ ಬದುಕಿಗಾಗಿ ಅಲ್ಲ, ಅರಿವಿನ ಜನ್ಮಕ್ಕಾಗಿ ನಾವು ಸತ್ಯ ಮತ್ತು ಮಿಥ್ಯೆಯ ನಡುವಿನ ವ್ಯತ್ಯಾಸ ಅರಿತು, ಜೀವನದ ನಿಜವಾದ ಅರ್ಥ ತಿಳಿದುಕೊಳ್ಳಬೇಕು. ನಾಶವಾಗುವ ವಸ್ತುಗಳ ಹಿಂದೆ ಹೆಚ್ಚು ಆಸಕ್ತಿ ತೋರದೆ ನಮ್ಮೊಳಗಿರುವ ಆತ್ಮತತ್ವ ಅರಿಯುವ ಪ್ರಯತ್ನ ಮಾಡಬೇಕು ಎಂದರು.

ತಾವರಗೇರಾದ ಕುಮಾರ ಸ್ವಾಮಿಗಳು ಮಾತನಾಡಿ, ಮನುಷ್ಯನ ಜೀವನ ಕ್ಷಣಿಕವಾಗಿದ್ದು, ಸಂಪತ್ತು, ಅಧಿಕಾರ,ದೇಹ ಸೇರಿದಂತೆ ಎಲ್ಲವೂ ನಶ್ವರವಾಗಿವೆ. ಆದರೆ ಆತ್ಮತತ್ವ ಹಾಗೂ ಸತ್ಕಾರ್ಯ ಶಾಶ್ವತ ಮೌಲ್ಯ ಹೊಂದಿವೆ. ಆದ್ದರಿಂದ ಪ್ರತಿಯೊಬ್ಬರೂ ಸತ್ಯ, ಧರ್ಮ,ದಯೆ, ಸೇವೆ ಹಾಗೂ ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಾತ್ಮಿಕ ಚಿಂತಕ ಅಂದಪ್ಪ ಪಾವಿ ಮಾತನಾಡಿ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಮೂಲಕ ಮನುಷ್ಯ ತನ್ನ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿ ಕಂಡುಕೊಳ್ಳಬಹುದು. ಹಿರಿಯರ ಹಾಗೂ ಸಂತರ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಬಸವಾನಂದ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಕ್ತರು ವಿಶೇಷಪೂಜೆ, ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ನಡೆದವು. ದೇವೇಂದ್ರಪ್ಪ ಕಲ್ಲಬಾವಿ, ಶಿವಪ್ಪಸ್ವಾಮಿಗಳು, ಸಬ್ಬಹುಣಸಿಗಿ ಭಕ್ತಾದಿ ಇತರರು ಇದ್ದರು.