ಸಾರಾಂಶ
ಭಗವದ್ಗೀತೆ ಮಹತ್ವ ಅರಿತರೆ ಜೀವನವೇ ಸಾರ್ಥಕವಾಗುತ್ತದೆ. ಗೀತೆ ಪುಸ್ತಕ ಪ್ರತಿ ಮನೆಯಲ್ಲಿರಬೇಕು. ಸಾಧ್ಯವಾದಷ್ಟು ಅಧ್ಯಯನ ಮಾಡಬೇಕು.
ಜಮಖಂಡಿ: ಧಾರ್ಮಿಕ ಕಾರ್ಯಕ್ರಮಗಳಿಗಲ್ಲಿ ಪ್ರತಿಯೊಬ್ಬರು ಭಾಗವಹಿಸಿದಾಗ ಮಾತ್ರ ಮುಂದಿನ ಪೀಳಿಗೆ ಧರ್ಮ ಮಾರ್ಗದಲ್ಲಿರುತ್ತದೆ ಎಂದು ಪಂಡಿತ ರಂಗಾಚಾರ್ಯ ಜೋಶಿ ಹೇಳಿದರು.
ನಗರದ ಸಿದ್ದರಾಮೇಶ್ವರ ಕಾಲೋನಿ ಶ್ರೀ ಉತ್ತರಾದಿಮಠದಲ್ಲಿ ಬ್ರಾಹ್ಮಣ ಸಂಘ ಏರ್ಪಡಿಸಿದ್ದ ಶ್ರೀಮದ್ಗೀತಾ ಜಯಂತಿ, ಪ್ರತಿಭಾ ಪುರಸ್ಕಾರ, ಗೀತಾ ಕಂಠಪಾಠ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಅವರು, ಭಗವದ್ಗೀತೆ ಮಹತ್ವ ಅರಿತರೆ ಜೀವನವೇ ಸಾರ್ಥಕವಾಗುತ್ತದೆ. ಗೀತೆ ಪುಸ್ತಕ ಪ್ರತಿ ಮನೆಯಲ್ಲಿರಬೇಕು. ಸಾಧ್ಯವಾದಷ್ಟು ಅಧ್ಯಯನ ಮಾಡಬೇಕು. ಅದರಿಂದ ದೇವರ ಅನುಗ್ರಹ ವಾಗುತ್ತದೆ. ದಿನನಿತ್ಯ ಒಂದು ಅಧ್ಯಾಯವನ್ನಾದರೂ ಪಠಣ ಮಾಡುವ ರೂಢಿಮಾಡಿಕೊಳ್ಳಬೇಕು ಎಂದು ಹೇಳಿದರು.ಶಾಸ್ತ್ರದಲ್ಲಿ ಹೇಳಿದಂತೆ ನಿತ್ಯ ಕರ್ಮಗಳ ಆಚರಣೆ ಮಾಡಬೇಕು. ಸಕಾಮ ಕರ್ಮಗಳಾದರೂ ಸರಿ ದೇವರ ಪ್ರೀತಿಗಾಗಿ ಕರ್ಮಾಚರಣೆ ಮಾಡಿ ದೇವರಲ್ಲಿ ಸಮರ್ಪಿಸಬೇಕು ಎಂದರು. ದೇವರು ಗೀತೆಯನ್ನು ಅರ್ಜುನನ ನೆಪ ಮಾಡಿ ಸಕಲ ಸಜ್ಜನರಿಗೆ ತಿಳಿಸಿಕೊಟ್ಟಿದ್ದಾನೆ ಅದನ್ನು ಚನ್ನಾಗಿ ತಿಳಿದುಕೊಂಡು ನಿತ್ಯಪಾರಾಯಣ ಮಾಡಬೇಕು ಎಂದು ಹೇಳಿದರು. ಪಂಡಿತ ಸುಜಯೀಂದ್ರಾಚಾರ್ಯ ಮನಗೂಳಿ ಪ್ರವಚನ ನೀಡಿದರು. ಬ್ರಾಹ್ಮಣ ಸಂಘದ ಅಧ್ಯಕ್ಷ ರಾಘವೇಂದ್ರಾಚಾರ್ಯ ಉಮರ್ಜಿ ಮಾತನಾಡಿದರು.
ಎಸ್ಎಸ್ಎಲ್ಸಿ ಪಿಯುಸಿ ಮತ್ತು ಪದವಿಯಲ್ಲಿ ಸಾಧನೆ ಮಾಡಿದ 14 ಮಕ್ಕಳಿಗೆ ಸನ್ಮಾನ ನಡೆಯಿತು. ಸುಮಾರು ಹತ್ತಕ್ಕೂ ಅಧಿಕ ಮಕ್ಕಳು ಗೀತಾ ವಾಚನ ಮಾಡಿದರು. ಪಂಡಿತ ವಿಠ್ಠಲಾಚಾರ್ಯ ಉಮರ್ಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಾಡಿದರು. ರಾಘವೇಂದ್ರ ಥಿಟೆ ವಂದಿಸಿದರು.