ಪರಿಸರದ ನಾಡಿಮಿಡಿತ ಅರಿತರೆ ಬದುಕು ಸದೃಢ: ಕೃಷ್ಣೇಗೌಡ

| Published : Jan 31 2025, 12:49 AM IST

ಪರಿಸರದ ನಾಡಿಮಿಡಿತ ಅರಿತರೆ ಬದುಕು ಸದೃಢ: ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚಿದಾನಂದ್ ಮೂರ್ತಿ, ಮಕ್ಕಳು ಪರಿಸರದೊಂದಿಗೆ ಬೆರೆತಷ್ಟು ಅದರ ಮೇಲಿನ ಕಾಳಜಿ ಹೆಚ್ಚಾಗುತ್ತದೆ. ಆದ ಕಾರಣ ಮಕ್ಕಳಿಗೆ ಪರಿಸರ ಶಿಕ್ಷಣವನ್ನು ಕಲಿಸುವ ಉದ್ದೇಶದಿಂದ ಸಸ್ಯ ವಿಜ್ಞಾನಿಗಳೊಂದಿಗೆ, ಪರಿಸರವಾದಿಗಳೊಂದಿಗೆ ಮಕ್ಕಳನ್ನು ತೊಡಗಿಸಿ ಸಸ್ಯಗಳ ಬಗ್ಗೆ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ವಿಶ್ವ ಪರಿಸರ ಶಿಕ್ಷಣ ದಿನದ ಭಾಗವಾಗಿ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್, ಐ.ಆರ್.ಡಿ ಹಾಗೂ ಟಿ.ಡಿ.ಯು ಸಂಸ್ಥೆಗಳ ಸಹಯೋಗದಲ್ಲಿ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಸಹಾಯ ಮಾಡುವ ಅನುಭವ, ವೀಕ್ಷಣೆ, ಪ್ರಯೋಗಗಳು, ಹೊರಾಂಗಣ ಕಲಿಕೆಯ ವ್ಯಾಪ್ತಿಯೊಂದಿಗೆ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ತಾಲೂಕಿನ ಮಾಕಳಿ ಬೆಟ್ಟದಲ್ಲಿ ನಡೆಯಿತು.

ತಾಲೂಕಿನ ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಜಾಗೃತಿ ಮೂಡಿಸಿ, ಮುಂದಿನ ಪೀಳಿಗೆಗೆ ಆ ಸಂಪನ್ಮೂಲಗಳನ್ನು ಹೇಗೆ ಸಂರಕ್ಷಿಸುವುದು ಎಂಬುದನ್ನು ಕಲಿಸಲು, ಪರಿಸರದಲ್ಲಿ ಅಗತ್ಯ ಆಸಕ್ತಿಯನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವ ಉದ್ದೇಶವನ್ನು ವಿವರಿಸಲಾಯಿತು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಬೇಸಿಗೆಯಲ್ಲಿ ಅಸಹಜವಾಗಿ ಕಾಡಿಗೆ ಬೆಂಕಿ ಬೀಳುತ್ತಿದ್ದು, ಇದು ಮಾನವ ನಿರ್ಮಿತವಾಗಿದೆ. ಇದರ ಬಗ್ಗೆ ಮಕ್ಕಳು ಇಂದಿನಿಂದಲೇ ಅರಿವು ಮೂಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಟಿ.ಡಿ.ಯುನ ಉಪನ್ಯಾಸಕ ಡಾ. ಅಬ್ದುಲ್ ಕರೀಂ ಮಾತನಾಡಿ, ನಮ್ಮ ವಿದ್ಯಾರ್ಥಿ ಜೀವನದಲ್ಲಿ ಈ ರೀತಿ ಕಾಡಿನಲ್ಲಿ ಸುತ್ತಾಡುವ ಅವಕಾಶಗಳು ಸಿಗುತ್ತಿರಲಿಲ್ಲ. ಇಂದಿನ ಮಕ್ಕಳಿಗೆ ಈ ರೀತಿ ಅವಕಾಶವಿದ್ದರೂ ಉತ್ತಮ ಅರಣ್ಯ ಉಳಿದಿಲ್ಲ, ಅವುಗಳನ್ನು ಉಳಿಸಿಕೊಳ್ಳುವ ಕಡೆ ಗಮನಹರಿಸಬೇಕು ಎಂದು ಹೇಳಿದರು.

ಮಾನವಶಾಸ್ತ್ರಜ್ಞ ಡಾ. ರೊಮೈನ್ ಸಿಮೆನೆಲ್ ಮಾತನಾಡಿ, ಹಾರ, ಆಟಿಕೆ ತಯಾರಿಕೆ, ಸಸ್ಯಗಳೊಂದಿಗೆ ಸಂಗೀತವನ್ನು ಅನ್ವೇಷಿಸುವುದು, ಸಸ್ಯಗಳಿಂದ ಬಣ್ಣ, ಸಸ್ಯಗಳ ಔಷಧೀಯ ಉಪಯೋಗಗಳು ಈ ಎಲ್ಲಾ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಲಿ ಕಲಿಯ ಪ್ರಯೋಗದೊಂದಿಗೆ ಕಾನನದಲ್ಲಿ ಒಳಗೊಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿದರು.

ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚಿದಾನಂದ್ ಮೂರ್ತಿ, ಮಕ್ಕಳು ಪರಿಸರದೊಂದಿಗೆ ಬೆರೆತಷ್ಟು ಅದರ ಮೇಲಿನ ಕಾಳಜಿ ಹೆಚ್ಚಾಗುತ್ತದೆ. ಆದ ಕಾರಣ ಮಕ್ಕಳಿಗೆ ಪರಿಸರ ಶಿಕ್ಷಣವನ್ನು ಕಲಿಸುವ ಉದ್ದೇಶದಿಂದ ಸಸ್ಯ ವಿಜ್ಞಾನಿಗಳೊಂದಿಗೆ, ಪರಿಸರವಾದಿಗಳೊಂದಿಗೆ ಮಕ್ಕಳನ್ನು ತೊಡಗಿಸಿ ಸಸ್ಯಗಳ ಬಗ್ಗೆ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಸಸ್ಯ ವಿಜ್ಞಾನಿಗಳಾದ ಆರ್. ಗಣೇಶನ್, ವೈಷ್ಣವಿ , ಟಿ.ಡಿ.ಯುನಿವರ್ಸಿಟಿಯ ಅಮ್ರಿತ, ಅರುಣ್, ಸುದೇಶ್ನಾ ಪ್ರಧಾನ್ , ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಮುರುಳಿ, ದಿವಾಕರ್, ನವೀನ್ ಮತ್ತು ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ. ಸಿದ್ದರಾಮಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಪ್ಪ ಉಪಸ್ಥಿತರಿದ್ದರು.