ಮಕ್ಕಳಿಗೆ ಊಟ ಮಾಡಿಸಲು ಅವರ ಕೈಯಲ್ಲಿ ಮೊಬೈಲ್ ಕೊಡುವುದು ಸಂಸ್ಕಾರವಲ್ಲ. ಸರಿಯಾದ ಮಾರ್ಗದಲ್ಲಿ ಮೊದಲು ಪೋಷಕರು ನಡೆಯಬೇಕಾಗಿದೆ.
ನರಗುಂದ: ಬದುಕಿನ ಬಗ್ಗೆ ಎಲ್ಲರಿಗೂ ಕನಸಿರುತ್ತದೆ. ಅದನ್ನು ನನಸಾಗಿಸಲು ತಿಳಿವಳಿಕೆ, ಮಾರ್ಗದರ್ಶನ ಅವಶ್ಯವಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ತಿಳಿಸಿದರು.ಗುರುವಾರ ಪಟ್ಟಣದ ಸಮೃದ್ಧಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಾಮೂಹಿಕ ಸಹಸ್ರಲಿಂಗ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಮಾಡುವ ಕೆಲಸವನ್ನು ಸಂಘವು ಮಾಡುತ್ತಿದೆ. ಶಿಕ್ಷಣ, ಕೃಷಿ, ಗ್ರಾಮಾಭಿವೃದ್ಧಿ, ಆರೋಗ್ಯಕ್ಕೆ ನೆರವು ನೀಡುತ್ತಿದೆ ಎಂದರು.
ಮಕ್ಕಳಿಗೆ ಊಟ ಮಾಡಿಸಲು ಅವರ ಕೈಯಲ್ಲಿ ಮೊಬೈಲ್ ಕೊಡುವುದು ಸಂಸ್ಕಾರವಲ್ಲ. ಸರಿಯಾದ ಮಾರ್ಗದಲ್ಲಿ ಮೊದಲು ನಾವು ನಡೆಯಬೇಕಾಗಿದೆ. ಧ್ಯಾನ ಮತ್ತು ಯೋಗವನ್ನು ಕಲಿಯಬೇಕಾಗಿದೆ. ಸಂಘವು 17 ಸಾವಿರ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದೆ. ಸರ್ಕಾರಕ್ಕಿಂತ ಮೊದಲು ಧರ್ಮಸ್ಥಳ ಸಂಘವು ಸಾಕಷ್ಟು ಯೋಜನೆ ಜಾರಿಗೆ ತಂದಿದೆ ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಧರ್ಮಸ್ಥಳಕ್ಕೆ 800 ವರ್ಷಗಳ ಇತಿಹಾಸವಿದೆ. ಸಂಘವು ಶೇ. 80ರಷ್ಟು ಮಹಿಳೆಯರಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ನೆರವಿನ ಜತೆಗೆ ಜ್ಞಾನವನ್ನು ನೀಡಿದೆ. ಸಂಸ್ಕಾರಕ್ಕಾಗಿ ಪ್ರತಿ ವಲಯಗಳಲ್ಲಿ ಸಾಮೂಹಿಕ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದೆ ಎಂದರು.ಪತ್ರಿವನ ಮಠದ ಡಾ. ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಮಾತನಾಡಿ, ಮಠಮಾನ್ಯಗಳು ಸೇವಾಕಾರ್ಯದ ಮೂಲ ನೆಲೆಯಾಗಿವೆ. ಸಂಘವು ಎಲ್ಲ ರಂಗಗಳಲ್ಲೂ ಸೇವಾಕಾರ್ಯ ಸಲ್ಲಿಸಿ, ಯಶಸ್ಸು ಸಾಧಿಸಿದೆ. ಸರ್ಕಾರಕ್ಕೆ ಸರಿಸಮಾನ ಕೆಲಸವನ್ನು ಸಂಘವು ಮಾಡುತ್ತಿದೆ ಎಂದರು.ಕಾಂಗ್ರೆಸ್ ಘಟಕದ ತಾಲೂಕಾಧ್ಯಕ್ಷ ಪ್ರವೀಣ ಯಾವಗಲ್ಲ, ಅಪ್ಪಣ್ಣ ನಾಯ್ಕರ, ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು. ಬೆಳಗ್ಗೆ 504 ವ್ರತಧಾರಿ ತಾಯಂದಿರಿಂದ 5 ಲಕ್ಷ ಬಿಲ್ವಾರ್ಚನೆ ಮತ್ತು ಪಂಚಾಕ್ಷರಿ ಮಂತ್ರ ಹೇಳಲಾಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮಾಜಿ ಅಧ್ಯಕ್ಷೆ ನೀಲವ್ವ ಪವಾಡಪ್ಪ ವಡ್ಡಿಗೇರಿ, ಎಚ್.ಬಿ. ಅಸೂಟಿ, ತವನಪ್ಪ ರೋಖಡೆ, ವಿಷ್ಣು ಸಾಠೆ, ರವಿ ಯರಗಟ್ಟಿ, ರಾಜೇಸಾಬ ತಹಶೀಲ್ದಾರ, ಜ್ಯೋತಿ ಕಾಳೆ, ರೂಪಾ ಶೀಲವಂತರ, ಶಿಲ್ಪಾ ಬಿಜಾಪೂರ, ಸುರ್ವಣಾ ಅಳಗವಾಡಿ, ಅಕ್ಷಯ, ಆನಂದ, ಕಳಕೇಶ, ಪ್ರಗತಿಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸರ್ವ ಸದಸ್ಯರು ಸೇರಿದಂತೆ ಮುಂತಾದವರು ಇದ್ದರು. ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.