ಕನ್ನಡಪ್ರಭ ವಾರ್ತೆ ಯಾದಗಿರಿ

ಜ್ಞಾನಕ್ಕೆ ಸಮಾನವಾದ ವಸ್ತು ಮತ್ತೊಂದಿಲ್ಲ ಎಂಬುದು ಭಾರತೀಯ ತತ್ವಶಾಸ್ತ್ರದ ಪ್ರಮುಖ ವಾಕ್ಕು. ಜ್ಞಾನವು ವ್ಯಕ್ತಿಯನ್ನು ಪ್ರಕಾಶಮಾನವಾಗಿ ಮಾಡುವುದು, ಪ್ರಪಂಚದ ಯಾವುದೇ ಭೌತಿಕ ಸಂಪತ್ತು ಕಳ್ಳತನವಾಗಬಹುದು ಅಥವಾ ನಾಶವಾಗಬಹುದು, ಆದರೆ ಜ್ಞಾನವೆಂಬ ಸಂಪತ್ತು ಎಂದಿಗೂ ಕರಗುವುದಿಲ್ಲ. ಜ್ಞಾನ ದಿಂದಲೇ ಮುಕ್ತಿ ಮುಕ್ತಿ, ಪರಮಶಾಂತಿ ದೊರೆಯುವುದು ಎಂದು ಅರಿವು - ಆಚಾರ ಸದ್ಭಾವನಾ ಸಂಸ್ಥೆಯ ಮುಖ್ಯಸ್ಥ ಶಂಭುಲಿಂಗಪ್ಪ ಅರುಣಿ ಹೇಳಿದರು.

ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಶಿವಶರಣ ಚನ್ನಪ್ಪಯ್ಯನವರ ಮಹಾಮನೆಯಲ್ಲಿ ಚಂದನ ವಾಹಿನಿ ಪ್ರಸ್ತುತ ಪಡಿಸುತ್ತಿರುವ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ ಗ್ರಾಮದ ಯುವ ಪ್ರತಿಭೆ ತುಳಜಾರಾಮ ಪತಂಗೆ ಅವರಿಗೆ ಸನ್ಮಾನಿಸಿ ಮಾತನಾಡಿದರು.

ಚಿಕ್ಕಂದಿನಿಂದ ತುಳಜಾರಂ ವೃತ್ತ ಪತ್ರಿಕೆ, ಮಾಸಿಕ ಹಾಗೂ ದೂರದರ್ಶನದ ಕ್ಷಿಜ್‌ಗಳಲ್ಲಿ ವಿಶೇಷ ಆಸಕ್ತಿಯಿಂದ ಭಾಗವಹಿಸುತ್ತಾ ಅತ್ಯಂತ ಕ್ರಿಯಾಶೀಲತೆಯಿಂದ ಇರುವುದನ್ನು ನೋಡಿದ್ದೇವೆ, ಅವರು ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉನ್ನತ ಸ್ಥಾನ ಗಳಿಸಿ ಊರು, ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿಯನ್ನು ತರುವಂತಾಗಲಿ ಎಂದು ಈ ವೇಳೆ ಆಶಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಚಾರ್ಯ ಜ್ಯೋಷಿ ಮಾತನಾಡಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ತುಳಜಾರಾಮ ಪತಂಗೆ, ಇಂದು ಗ್ರಾಮದಲ್ಲಿ ಹಿರಿಯರು ಹಾಗೂ ಸ್ನೇಹಿತರ ಬಳಗ ವಿಶೇಷವಾಗಿ ಸನ್ಮಾನಿಸಿದ್ದಾರೆ, ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು. ಈ ವೇಳೆ ಶಾಂತವೀರಯ್ಯ ಸ್ವಾಮಿ ಪತ್ರಿಮಠ, ಓಂಕಾರ ವಿಶ್ವಕರ್ಮ, ಅಯ್ಯಪ್ಪ ವಿಶ್ವಕರ್ಮ, ಈಶಪ್ಪ ಮಾಲಿ ಪಾಟೀಲ ಮತ್ತಿತರರು ಇದ್ದರು.