ಯುವ ಜನತೆಗೆ ಗತಕಾಲದ ಅರಿವು ಮುಖ್ಯ

| Published : May 21 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯುವ ಜನರು ನಮ್ಮ ಹಿಂದಿನ ಗತಕಾಲದ ವೈಭವ ಅರಿಯುವ ದೃಷ್ಟಿಕೋನ ಹೊಂದಿರಬೇಕು. ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸಿಕ್ಯಾಬ್ ಎಆರ್‌ಎಸ್‌ಐ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯುವ ಜನರು ನಮ್ಮ ಹಿಂದಿನ ಗತಕಾಲದ ವೈಭವ ಅರಿಯುವ ದೃಷ್ಟಿಕೋನ ಹೊಂದಿರಬೇಕು. ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸಿಕ್ಯಾಬ್ ಎಆರ್‌ಎಸ್‌ಐ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಧಾರವಾಡ ವಲಯದಿಂದ ನಗರದಲ್ಲಿರುವ ವಿಶ್ವವಿಖ್ಯಾತ ಗೋಳಗುಮ್ಮಟದ ಆವರಣದಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸ ತಿಳಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಮಾತಿದೆ. ಅದರಂತೆ ತಮ್ಮ ಊರಿನಲ್ಲಿ ಮಹತ್ವಪೂರ್ಣ ದಾಖಲೆಗಳು ಹಾಳಾಗುತ್ತಿದ್ದರೆ, ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ತಂದು ಕೊಟ್ಟರೆ ತಮ್ಮ ಊರಿನ ವಿಳಾಸ ಮತ್ತು ಮಾಹಿತಿಯನ್ನು ಹಾಗೂ ತಂದು ಕೊಟ್ಟವರ ಹೆಸರು ಕೂಡ ಹಾಕುವುದರ ಜೊತೆಗೆ ಅದರ ಸಂರಕ್ಷಣೆಯ ಜವಾಬ್ದಾರಿಯನ್ನು ಮಾಡಲಾಗುತ್ತದೆ. ಹೀಗಾಗಿ ಯಾವುದೇ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯ ಅವಶೇಷಗಳನ್ನು ನಾಶವಾಗದಂತೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಹಾಯಕ ಪುರಾತತ್ವ ಅಧಿಕಾರಿ ಎನ್.ಪ್ರಸನ್ನಕುಮಾರ್ ಮಾತನಾಡಿ, ಭಾರತವು ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಅವು ಮುಂದಿನ ಜನಾಂಗಕ್ಕೆ ಸ್ಫೂರ್ತಿದಾಯಕ ಚರಿತ್ರೆಯನ್ನು ಹಾಗೂ ಕಥೆಗಳನ್ನು ಹೇಳುತ್ತವೆ. ಅವುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಹಾಗೂ ನಮ್ಮ ಮುಂದಿನ ಜನಾಂಗದವರಿಗೆ ತಲುಪಿಸುವ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.

ವಿ.ಬಿ.ದರಬಾರ ಪಿಯು ಕಾಲೇಜಿನ ಇತಿಹಾಸ ವಿಭಾಗದ ಅನಿಲಕುಮಾರ ಥೊಬ್ಬಿ ಮಾತನಾಡಿ, ವಸ್ತು ಸಂಗ್ರಹಾಲಯಗಳು ಜನಸಾಮಾನ್ಯರಲ್ಲಿ ನಮ್ಮ ಸಾಂಸ್ಕೃತಿಕ ಸಂಪತ್ತಿನ ಅರಿವು ಮೂಡಿಸುವಲ್ಲಿ ಬಹಳ ಮಹತ್ವ ಕೆಲಸವನ್ನು ಮಾಡುತ್ತವೆ ಎಂದು ವಿವರಿಸಿದರು.

ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯದ ದಿನಾಚರಣೆಯ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ, ಚಿತ್ರಕಲೆ(ಡ್ರಾಯಿಂಗ್) ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ ಮತ್ತು ಇಲಾಖೆಯ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಸುರೇಶ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆರ್.ಎಂ.ಕರ್ಜಗಿ, ವಿಷ್ಣುತ್‌ಗೌಡ, ಇಲಾಖೆಯ ಸಿಬ್ಭಂದಿ ವರ್ಗ, ಪ್ರವಾಸಿ ಮಿತ್ರರು, ವಿ.ಬಿ.ದರಾಬಾರ ಹೈಸ್ಕೂಲ್‌ನ ಬಿಸಿಎಂ ವಿದ್ಯಾರ್ಥಿನಿಯರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು.