ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕಾಶ್ಮೀರದ ಪಹಲ್ಗಾಮ್ ಘಟನೆಯಿಂದ ಮುಂದೂಡಲ್ಪಟ್ಟಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರವರ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ದಿ. 21 ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು.ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌರವ ಗ್ರಂಥ ಬಿಡುಗಡೆ ಸಮಾರಂಭದ ವೇದಿಕೆ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಹಕಾರಿ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಹಾಗಾಗಿ ಇಡೀ ರಾಜ್ಯದ ಮೂಲೆ ಮೂಲೆಗಳಿಂದ ಒಂದೂವರೆ ಲಕ್ಷಕ್ಕೂ ಅಧಿಕ ಸಹಕಾರಿಗಳು, ಕೆ.ಎನ್.ಆರ್ ಹಿತೈಷಿಗಳು, ಸಾರ್ವಜನಿಕರು ಬರುವ ನಿರೀಕ್ಷೆ ಇದೆ. ಹಾಗಾಗಿ ಬೃಹತ್ ಶಾಮಿಯಾನ ವ್ಯವಸ್ಥೆ ಮಾಡಬೇಕಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದಂತೆ ಭೂಮಿ ಪೂಜೆ ಮಾಡಿ ವೇದಿಕೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟದ ಸದಸ್ಯರು , ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ಜನರ ಮನಸ್ಸಿನಲ್ಲಿ ಉಳಿಯಲಿದೆ. ಕೆ.ಎನ್.ರಾಜಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಮೃತ ಮಹೋತ್ಸವ ಹಾಗೂ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರವವನ್ನು ಅಮೃತ ಮಹೋತ್ಸವ ಅಭಿನಂದನಾ ಗ್ರಂಥ ಸಮಿತಿ ಆಯೋಜಿಸಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.ಕೆ.ಎನ್.ರಾಜಣ್ಣ ಅವರ ಇಷ್ಟದ ಖಾತೆ ಸಹಕಾರ ಅದೇ ಖಾತೆ ಸಿಕ್ಕಿದೆ. ಮುಂದಿನ ಮೂರು ವರ್ಷ ಅದೇ ಖಾತೆಯಲ್ಲಿ ಮುಂದುವರೆಯಲಿದ್ದಾರೆ. ಗೃಹ ಸಚಿವರಾಗುತ್ತಾರೆ ಎನ್ನುವುದು ನನಗೆ ತಿಳಿಯದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಆರ್.ರವೀಂದ್ರ, ಅಭಿನಂದನಾ ಸಮಿತಿಯ ಮುಖ್ಯಸ್ಥರಾದ ಎಸ್.ನಾಗಣ್ಣ, ಮುರುಳೀಕೃಷ್ಣಪ್ಪ, ಟಿ.ಆರ್. ಆಂಜಿನಪ್ಪ, ಡಾ.ಶೈಲಾ ನಾಗರಾಜು, ಎಂ.ಎಚ್. ನಾಗರಾಜು, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಂಗಮಪ್ಪ, ಕಲ್ಲಹಳ್ಳಿ ದೇವರಾಜು, ಗಂಗಣ್ಣ, ಪುರುಷೋತ್ತಮ, ಪಿ.ಮೂರ್ತಿ, ವೆಂಕಟೇಗೌಡ, ಧನಿಯಕುಮಾರ್. ಮಂಜೇಶ್, ಎಂ.ವಿ. ರಾಘವೇಂದ್ರಸ್ವಾಮಿ, ನಾರಾಯಣಗೌಡ, ಪಾತಣ್ಣ, ಟಿ.ಪಿ.ಮಂಜುನಾಥ್, ಲಕ್ಷ್ಮೀನಾರಾಯಣ, ಲಕ್ಷ್ಮಣ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.ಎಕ್ಸ್ಪ್ರೆಸ್ ಲಿಂಕ್ ಕಾಮಗಾರಿಗೆ ವಿರೋಧ
ಹೇಮಾವತಿ ಎಕ್ಪ್ರೆಪ್ರೆಸ್ ಲಿಂಕ್ ಕೆನಾಲ್ಗೆ ವೈಯುಕ್ತಿಕವಾಗಿ ನನ್ನ ವಿರೋಧವಿದೆ. ಕೇವಲ ಕುಣಿಗಲ್ ಒಂದರ ಅಂಕಿ ಅಂಶ ತೋರಿಸಿ ಯೋಜನೆ ಮಾಡಲು ಹೊರಟಿದ್ದಾರೆ. ಅದೇ ವರ್ಷಗಳಲ್ಲಿ ತುಮಕೂರು, ಗುಬ್ಬಿ, ಮಧುಗಿರಿ, ಕೊರಟಗೆರೆ, ಸಿರಾ, ತುಮಕೂರು ಗ್ರಾಮಾಂತರ ಕ್ಷೇತ್ರಗಳಿಗೆ ಎಷ್ಟು ನೀರು ಹರಿದಿದೆ ಎಂಬ ಮಾಹಿತಿ ನೀಡಲಿ. ಅದನ್ನು ಬಿಟ್ಟು, ಒಂದು ತಾಲೂಕಿನ ಅಂಕಿ ಅಂಶದ ಮೇಲೆ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ರೂಪಿಸಿರುವುದು ಸರಿಯಲ್ಲ ಎಂದು ಆರ್.ರಾಜೇಂದ್ರ ಆಕ್ಷೇಪಿಸಿದರು.ಸರ್ಕಾರ , ಆರ್ಸಿಬಿ ತಂಡದ ತಪ್ಪಿದೆಆರ್.ಸಿ.ಬಿ ವಿಜಯೋತ್ಸವದ ವೇಳೆ ಜರುಗಿದ ದುರ್ಘಟನೆಗೆ ಸರ್ಕಾರ, ಆರ್.ಸಿ.ಬಿ ತಂಡ. ಕಾರ್ಯಕ್ರಮ ಆಯೋಜಕರು ಎಲ್ಲರದ್ದೂ ತಪ್ಪಿದೆ. ಕಪ್ ಗೆದ್ದ ಮಾರನೇಯ ದಿನವೇ ಕಾರ್ಯಕ್ರಮ ಆಯೋಜಿಸುವ ಅಗತ್ಯ ಇರಲಿಲ್ಲ. ಈ ಪ್ರಕರಣದಲ್ಲಿ ಗುಪ್ತಚರ ವಿಭಾಗದ ಎಡಿಜಿಪಿ ಅವರನ್ನು ಅಮಾನತು ಮಾಡಬೇಕು. ಬಹೃತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರಿಯಾದ ಮಾಹಿತಿಯನ್ನು ಸರ್ಕಾರಕ್ಕೆ ಗುಪ್ತಚರ ವಿಭಾಗ ತಲುಪಿಸಬೇಕಿತ್ತು. ಈ ಲೋಪವೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯಿತು ಎಂದ ಅವರು ಹೇಳಿದರು.