ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕೊಡಂಗಲ್ಲೂರ್ ಶ್ರೀ ಕುರಂಭ (ಭಗವತಿ) ದೇವಸ್ಥಾನದಲ್ಲಿ ಗುರುವಾರ ವಿಶೇಷ ವಾರ್ಷಿಕ ಮಹಾಪೂಜೆಯೊಂದಿಗೆ ಆರಂಭಗೊಂಡು ರಾತ್ರಿ ಬೆಳ್ಳಾಟಂ ಹಾಗೂ ಶುಕ್ರವಾರ ಬೆಳಗ್ಗೆ ಹರಕೆ ಅರ್ಪಣೆಗಳನ್ನು ಶ್ರದ್ಧಾಭಕ್ತಿಯಿಂದ ಸಮರ್ಪಿಸುವುದರೊಂದಿಗೆ ದೇವಾಲಯದ ವಾರ್ಷಿಕೋತ್ಸವ ಸಂಪನ್ನಗೊಂಡಿತು. ಕೊಡಗಂಲ್ಲೂರ್ ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ 60ನೇ ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ಕೇಸರಿ ಬಂಟಿಂಗ್ಸ್, ಬಣ್ಣ ಬಣ್ಣದ ಹೂ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು. ವಾರ್ಷಿಕ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ 4ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಗಣಪತಿ ಮತ್ತು ಸುಬ್ರಮಣ್ಯ ಸ್ವಾಮಿ ದೇವರ ಪೂಜೆ, ಮುತ್ತಪ್ಪ ದೇವರ ಬೆಳ್ಳಾಟ ಮತ್ತು ಪೈಗುಂತಿ, 7.30ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ಗುಳಿಗನ ಪೂಜೆ, 8.15ಕ್ಕೆ ಶ್ರೀ ಭದ್ರಕಾಳಿ ದೇವಿಗೆ ಆರ್ಚನೆ, ನೈವೇದ್ಯ ಪೂಜೆ, 8.45ಕ್ಕೆಶ್ರೀ ದೇವಿ ದರ್ಶನ, 9ಕ್ಕೆ ತಲಪುರಿ ಮೆರವಣಿಗೆ, 9.30ಕ್ಕೆ ವಸೂರಿ ಮಾಲೆ ದೇವರ ಬೆಳ್ಳಾಟಂ, 9.45ಕ್ಕೆ ದೇವಿ ದರ್ಶನ, ನಂತರ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಶುಕ್ರವಾರ ಬೆಳಗ್ಗೆ 9ಕ್ಕೆ ದೇವಿ ದರ್ಶನ, 10.45ಕ್ಕೆ ದೇವಿಗೆ ಹರಕೆಯ ನಂತರ ದೇವಿಗೆ ಅರ್ಪಣೆ ನೆರವೇರಿತು. 2 ದಿನಗಳ ಕಾಲ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು.ಸುಂಟಿಕೊಪ್ಪ, ಶ್ರೀದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು, ಕೇರಳ ರಾಜ್ಯದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.ದೇವಾಲಯದ ಮುಖ್ಯಸ್ಥರಾದ ಪಿ.ಆರ್. ಶಾಂತ ರಾಮಕೃಷ್ಣ, ಪಿ.ಆರ್. ಸುಕುಮಾರ್, ಸುನಿಲ್ ಕುಮಾರ್ ಇತರರು ಇದ್ದರು.