ಸಾರಾಂಶ
ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆಚರಿಸಲ್ಪಡುವ 56ನೇ ಗಣೇಶೋತ್ಸವದ ಪ್ರಯುಕ್ತ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ ಭಾನುವಾರ ಸ್ಥಳೀಯ ಶ್ರೀ ಶಂಕರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆಚರಿಸಲ್ಪಡುವ 56ನೇ ಗಣೇಶೋತ್ಸವದ ಪ್ರಯುಕ್ತ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ ಭಾನುವಾರ ಸ್ಥಳೀಯ ಶ್ರೀ ಶಂಕರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.ಸ್ಪರ್ಧಾ ಕಾರ್ಯಕ್ರಮವನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ಉದ್ಘಾಟಿಸಿದರು. ಮುಖ್ಯ ಅತಿಥಿ ಸಾಹಿತಿ ಪೂರ್ಣಿಮಾ ಜನಾರ್ದನ್ ಮಾತನಾಡಿ, ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯ ಅನಾವರಣಕ್ಕೆ ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಉತ್ತೇಜನಕಾರಿಯಾಗಿದೆ ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೂರಕ ವಾತಾವರಣ ಸೃಷ್ಟಿಸಬಲ್ಲದು ಎಂದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕೋಶಾಧಿಕಾರಿ ವಾದಿರಾಜ್ ಟಿ. ಸಾಲ್ಯಾನ್ ಇದ್ದರು. ಕಳೆದ 20 ವರುಷಗಳಿಂದ ನಿರಂತರವಾಗಿ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸಹಕರಿಸುತ್ತಿರುವ ಹಿರಿಯ ಚಿತ್ರ ಕಲಾವಿದ ತಾರಾನಾಥ್ ತೊಟ್ಟಂ, ಸಂಗೀತ ಕಲಾವಿದ ಸುನೀಲ್ ಕುಮಾರ್ ಅಂಬಲಪಾಡಿ ಇವರನ್ನು ಗೌರವಿಸಲಾಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಚಂದ್ರಾವತಿ ಕಾನಂಗಿ ಮಹಿಳೆಯರ ರಂಗವಲ್ಲಿ ಸ್ಪರ್ಧೆಗೆ ಚಾಲನೆ ನೀಡಿದರು. ಸತೀಶ್ ಕೊಡವೂರು ಸ್ವಾಗತಿಸಿ ನಿರೂಪಿಸಿದರು. ಜಗದೀಶ್ ಶೆಟ್ಟಿ ಬೆಳ್ಕಳೆ ವಂದಿಸಿದರು.