ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇತಿಹಾಸದಲ್ಲಿ ಕೊಳ್ಳೇಗಾಲ ಪ್ರದೇಶವನ್ನು ಇತಿಹಾಸಕಾರರು ಗುರುತಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಕೊಳ್ಳೇಗಾಲವೆಂದರೆ ಮಾಟ ಮಂತ್ರ ಪ್ರದೇಶವಲ್ಲ ಇದೊಂದು ಐತಿಹ್ಯ ನಗರ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ ಹಾಗೂ ಉಪನ್ಯಾಸಕ ಶ್ರೀನಿವಾಸ್ ಹೇಳಿದರು.ಪಟ್ಟಣದ ಶ್ರೀ ಚೌಡೇಶ್ವರಿ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ಆಡಳಿತ ಮಂಡಳಿ, ದೇವಾಂಗ ಮಹಾಜನ ಸಂಸ್ಥೆ ಮತ್ತು ಶ್ರೀ ಭಗವಾನ್ ವಾಲ್ಮೀಕಿ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ಕೊಳ್ಳೇಗಾಲ ತಾಲೂಕಿನ ವಿವಿದದೆಡೆಯಲ್ಲಿ ಕಂಡುಬರುವ ಅಪರೂಪದ ಶಿಲ್ಪ ಕಲೆಯ ಚಿತ್ರಪಟಗಳ ಪ್ರದರ್ಶನವನ್ನು ಮಾಡಲಾಗಿರುವುದು ಹೆಮ್ಮೆಯ ಸಂಗತಿ. ನಿವೃತ್ತ ಚಿತ್ರಕಲಾ ಶಿಕ್ಷಕ ಆರ್ ರಘು ಅವರು ಈ ಅಪರೂಪದ ಚಿತ್ರಪಟಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡಿರುವುದು ಶ್ಲಾಘನೀಯ ವಿಚಾರ ಎಂದರು.
ಪಟ್ಟಣವು ಮಾಟ ಮಂತ್ರದ ಸ್ಥಳ ಎಂಬುದು ಕೇವಲ ಅಂದಿನ ಕಾಲಘಟ್ಟದಲ್ಲಿ ಇದ್ದ ಒಂದು ನಂಬಿಕೆಯಾಗಿತ್ತು, ಆದರೆ ರೇಷ್ಮೆ ಮತ್ತು ವಸ್ತ್ರ ತಯಾರಿಕೆಯಲ್ಲಿ ಬಹು ಪ್ರಮುಖ ಸ್ಥಳವಾಗಿ ಕರ್ನಾಟಕ ಇತಿಹಾಸದಲ್ಲಿ ಕೊಳ್ಳೇಗಾಲ ಪ್ರದೇಶವನ್ನು ಇತಿಹಾಸಕಾರರು ಗುರುತಿಸಿರುವುದು ಕೊಳ್ಳೇಗಾಲದ ವಾಸಿಗಳಾದ ನಾವೆಲ್ಲರೂ ಹೆಮ್ಮೆಪಡುವ ವಿಚಾರ ಎಂದರು. ಭಗವಾನ್ ವಾಲ್ಮೀಕಿ ಟ್ರಸ್ಟ್ ನ ಅಧ್ಯಕ್ಷ ಆರ್.ರಘು ಮಾತನಾಡಿ, ಕೊಳ್ಳೇಗಾಲದಲ್ಲಿ ಹಲವು ಐತಿಹ್ಯಗಳಿವೆ, ಇನ್ನು ಚರಿತ್ರೆಯಲ್ಲಿ ಉಳಿದಿರುವ ಮಾಸ್ತಿಗಲ್ಲು, ವೀರಗಲ್ಲುಗಳನ್ನು ಹಾಗೂ ಅಪರೂಪದ ಶಿಲ್ಪ ಕಲಾ ಮೂರ್ತಿಯನ್ನು ಉಳಿಯಲು ತಾಲೂಕು ಆಡಳಿತ ಯುವ ಪೀಳಿಗೆ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು, ನಮ್ಮ ಇತಿಹಾಸದ ಬಗ್ಗೆ ಅರಿಯುವ ಮೂಲಕ ಅದನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಕೈಜೋಡಿಸಬೇಕು, ಮಕ್ಕಳು ಕಲಿಕಾ ಹಂತದಲ್ಲೆ ಇತಿಹಾಸಕಾರರ ಚರಿತ್ರೆ ಹಾಗೂ ಕೊಳ್ಳೇಗಾಲದ ಇತಿಹಾಸವನ್ನು ಅರಿತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಭಗವಾನ್ ವಾಲ್ಮೀಕಿ ಟ್ರಸ್ಟ್ ವತಿಯಿಂದ ಶಾಲೆಯಲ್ಲಿನ 1ರಿಂದ 10ನೇತರಗತಿ ವರೆಗಿನ ಎಲ್ಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ, ನೋಟ್ ಪುಸ್ತಕಗಳನ್ನು ವಿರಿಸಲಾಯಿತು. ಶಿಕ್ಷಕ ಮುರುಗೇಶ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್, ಶಾಲಾ ಆಡಳಿತ ಮಂಡಳಿ ಸದಸ್ಯ ರಾಮಯ್ಯ, ಮುಖ್ಯಶಿಕ್ಷಕ ಸುರೇಶ್, ಕುನ್ನನಾಯಕ, ಮಹಾದೇವ ನಾಯಕ, ಉಪನ್ಯಾಸಕ ಕುಮಾರ್ ಇನ್ನಿತರಿದ್ದರು.ಕೊಳ್ಳೇಗಾಲದ ಇತಿಹಾಸ ಅತ್ಯಂತ ಸಂಪತ್ಬರಿತವಾದುದು. ಇಲ್ಲಿ ಬಗೆದಷ್ಟು ಅಮೂಲ್ಯ ಚರಿತ್ರೆಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ಸಂಶೋಧಕರು ಹೆಚ್ಚಿನ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಇದಕ್ಕೆ ಜಿಲ್ಲಾಡಳಿತ ಸಹ ಕೈಜೋಡಿಸಬೇಕು.-ಶಾಂತರಾಜು ಮಾಯಾಸುತ, ಶಿಕ್ಷಕ