ಕೊಪ್ಪಳ ತಾಲೂಕು ಗ್ಯಾರಂಟಿ ಕಮಿಟಿ: ಆದೇಶ ಪತ್ರ ಕೊಟ್ಟ ಎಡಿಸಿ

| Published : Mar 16 2024, 01:47 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮುನಿರಾಬಾದಿನ ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರ ಸ್ಯಾಮ್ಯುಯೆಲ್ ಅಧ್ಯಕ್ಷತೆಯಲ್ಲಿ 16 ಜನರ ಅನುಷ್ಠಾನ ಸಮಿತಿ ರಚಿಸಲಾಗಿದೆ.

ಕೊಪ್ಪಳ: ರಾಜ್ಯ ಸರ್ಕಾರದ ಬಹುಮುಖ್ಯ ಸಮಾಜಮುಖಿ ಯೋಜನೆಯಾದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರೇತರ ಸಮಿತಿ ರಚನೆ ಮಾಡಿದ್ದು, ಮೂರು ಹಂತದ ಕಮಿಟಿಯಲ್ಲಿ ಕೊಪ್ಪಳ ತಾಲೂಕು ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರತಿಯನ್ನು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಸದಸ್ಯರಿಗೆ ಕೊಟ್ಟರು.

ನಗರದ ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಮುನಿರಾಬಾದಿನ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರ ಸ್ಯಾಮ್ಯುಯೆಲ್ ಅಧ್ಯಕ್ಷತೆಯಲ್ಲಿ ಒಟ್ಟು 16 ಜನರ ಸಮಿತಿ ರಚಿಸಿ, ಸರ್ಕಾರದ ಮಾನ್ಯತೆಯೊಂದಿಗೆ ಆದೇಶ ನೀಡಲಾಗಿದೆ.

ಸಮಿತಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದು, ದೇವರಾಜ ನಡುವಿನಮನಿ, ರಾಮಣ್ಣ ಚೌಡ್ಕಿ ಹಟ್ಟಿ, ರಮೇಶ ಹ್ಯಾಟಿ ಭಾಗ್ಯನಗರ, ಜ್ಯೋತಿ ಮಂಜುನಾಥ ಗೊಂಡಬಾಳ, ಲತಾ ಗವಿಸಿದ್ದಪ್ಪ ಚಿನ್ನೂರ, ಅನ್ನದಾನಸ್ವಾಮಿ ಸಾಲಿಮಠ ಬೆಟಗೇರಿ, ಪರಶುರಾಮ ಕೊರವರ, ಅಶೋಕ ಗೋರಂಟ್ಲಿ, ಮಹಾಂತೇಶ ಹಾನಗಲ್, ಮಂಜುನಾಥ ಅಂಗಡಿ, ಎ. ಧರ್ಮರಾಜರಾವ್, ಆನಂದಪ್ಪ ಕಿನ್ನಾಳ, ಲಕ್ಷ್ಮಣ ಡೊಳ್ಳಿನ್ ಮತ್ತು ಅನ್ವರ ಹುಸೇನ್ ಗಡಾದ ಅವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ.

ಈ ಸಮಿತಿಯು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದು, ತೊಂದರೆಗಳಿದ್ದಲ್ಲಿ ಅಧಿಕಾರಿಗಳ ಮೂಲಕ ಸರಿಪಡಿಸುವ ಮತ್ತು ಅರ್ಹತೆಯಿದ್ದೂ ಯೋಜನೆ ಲಭಿಸದಿದ್ದಲ್ಲಿ ಅವರಿಗೆ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಅವರಿಂದ ಅಧ್ಯಕ್ಷ ಬಾಲಚಂದ್ರನ್, ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ, ದೇವರಾಜ ನಡುವಿನಮನಿ ಅದೇಶ ಸ್ವೀಕರಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಎಸ್.ಟಿ. ಘಟಕ ತಾಲೂಕು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮೊದಲಾದವರು ಇದ್ದರು.