ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಕೊರಗ ಸಮುದಾಯದ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಮನವಿ ಸ್ವೀಕರಿಸಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಮಣಿಪಾಲ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಕಳೆದ 6 ದಿನಗಳಿಂದ ಕೊರಗ ಸಮುದಾಯದ ಯುವ ಜನರಿಗೆ ಸರಕಾರಿ ಉದ್ಯೋಗ ನೇರ ನೇಮಕಾತಿ ಒತ್ತಾಯಿಸಿ ಸಮುದಾಯದ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಮನವಿ ಸ್ವೀಕರಿಸಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಇತ್ತೀಚೆಗೆ ಈ ಸಮುದಾಯದ ಯುವಜನತೆ ಶಿಕ್ಷಣದ ಮೂಲಕ ಉತ್ತಮ ಸಾಧನೆ ಮಾಡಿದ್ದು, ಅವರಿಗೆ ಉದ್ಯೋಗ ನೇರ ನೇಮಕಾತಿ ಮಾಡಲು ರಾಜ್ಯ ಸರಕಾರ ಮುಂದಾಗಬೇಕು. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇಲಾಖೆಯ ಸಚಿವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದರು.ಈ ಸಂದರ್ಭ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಅಧ್ಯಕ್ಷೆ ಸುಶೀಲ ನಾಡ, ಮುಖಂಡರಾದ ಶೇಖರ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ, ಪುನಿತ್ ಕಾರ್ಕಳ, ರೇಖಾ ಆತ್ರಾಡಿ, ತ್ರಿವೇಣಿ ಕಟಪಾಡಿ, ಪ್ರಜ್ಞಾ ಶಂಕರ ನಾರಾಯಣ, ಶೀನಾ ಬೆಳ್ಮಣ್ ಉಪಸ್ಥಿತರಿದ್ದರು.