ಕನ್ನಡಪ್ರಭ ವಾರ್ತೆ ನಾಪೋಕ್ಲು

ಮಳೆ ಸುರಿದರೆ ಇಲ್ಲಿನ ರಸ್ತೆಗಳು ತೋಡುಗಳಾಗುತ್ತವೆ. ಕೆಲವೆಡೆ ಕೆರೆಯಂತಾಗುತ್ತವೆ. ವಾಹನಗಳು ಕಾವೇರಿ ನದಿ ಪ್ರವಾಹದಲ್ಲಿ ಸಾಗುವಂತಾಗುತ್ತದೆ. ಇಲ್ಲಿಗೆ ಸಮೀಪ ನಾಪೋಕ್ಲು - ಬೆಟ್ಟಗೇರಿ ಮುಖ್ಯ ರಸ್ತೆಯ ಕೊಟ್ಟ ಮುಡಿಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮಳೆ ನೀರು ಸಂಪೂರ್ಣ ರಸ್ತೆಯನ್ನು ಆವರಿಸಿ ವಾಹನ ಸಂಚಾರಕ್ಕೆ ದುಸ್ತರ ವಾಯಿತು.

ಹಳೆ ತಾಲೂಕು ಭಾಗಗಳಲ್ಲಿ ವಾಹನ ಚಾಲಕರ ಬವಣೆ ಹೇಳತಿರದಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸಮಸ್ಯೆ ತಂದಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಸರು ನೀರು ತುಂಬಿಕೊಂಡು ರಸ್ತೆಗಳು ಕೆರೆಯಂತಾಗಿವೆ. ಎಲ್ಲಿಯೂ ಚರಂಡಿ ವ್ಯವಸ್ಥೆ ಇಲ್ಲ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ರಸ್ತೆಗಳು ಕಾವೇರಿ ಪ್ರವಾಹದಿಂದ ನದಿಯಂತಾಗಿದೆ. ಒಟ್ಟಿನಲ್ಲಿ ಪಟ್ಟಣದಲ್ಲಿ ನದಿ ಇಲ್ಲದಿದ್ದರೂ ನದಿಯಲ್ಲಿ ಸಾಗಿದ ಅನುಭವವಾಗುತ್ತಿದೆ ಎಂದು ವಾಹನ ಚಾಲಕರು ಅವಲತ್ತುಕೊಂಡಿದ್ದಾರೆ.