ಕೊಟ್ಟೂರು ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಮತ್ತೆ ನನೆಗುದಿಗೆ

| Published : Apr 21 2025, 12:47 AM IST

ಕೊಟ್ಟೂರು ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಮತ್ತೆ ನನೆಗುದಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿಯ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಬಸ್‌ ನಿಲ್ದಾಣದಲ್ಲಿದ್ದ ಖಾಸಗಿ ಕ್ಯಾಂಟಿನ್‌ ಮತ್ತು ವಾಣಿಜ್ಯ ಮಳಿಗೆಯನ್ನು ನಾಲ್ಕು ತಿಂಗಳ ಹಿಂದೆಯೇ ತೆರವು ಗೊಳಿಸಿದರು

ಜಿ.ಸೋಮಶೇಖರ ಕೊಟ್ಟೂರು

ನರ್ಮ ಯೋಜನೆಯಡಿ ₹3.5 ಕೋಟಿ ವೆಚ್ಚದಲ್ಲಿ ಕೊಟ್ಟೂರಿನಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಯೋಜನೆ ಮತ್ತೆ ನನೆಗುದಿಗೆ ಬಿದ್ದಿದೆ. ನಿಲ್ದಾಣ ನಿರ್ಮಾಣ ಮಾಡಲೆಂದು ಬಸ್ ನಿಲ್ದಾಣದಲ್ಲಿದ್ದ ಹೋಟೆಲ್‌ ಮತ್ತಿತರ ಮಳಿಗೆಗಳನ್ನು ಕಳೆದ ನಾಲ್ಕು ತಿಂಗಳ ಹಿಂದೆಯೇ ತೆರವುಗೊಳಿಸಿದ ಅಧಿಕಾರಿಗಳು ಇದೀಗ ಈ ಬಗ್ಗೆ ಸೊಲ್ಲೇ ಎತ್ತದಿರುವುದು ಇಲ್ಲಿನ ನಾಗರಿಕರಲ್ಲಿ ಬೇಸರ ತರಿಸಿದೆ.

ಕೊಟ್ಟೂರು ಪಟ್ಟಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವಂತೆಯೇ ಹೆಸರಾಂತ ವ್ಯಾಪಾರಿ ಕೇಂದ್ರವಾಗಿ ಗುರ್ತಿಸಿಕೊಂಡಿದೆ.

ಈ ಕಾರಣಕ್ಕಾಗಿ ಅತೀ ವೇಗವಾಗಿ ಪಟ್ಟಣ ಬೆಳೆಯುತ್ತಿದ್ದು, ಇದಕ್ಕೆ ಅನುಗುಣವಾಗಿ ಪಟ್ಟಣದಲ್ಲಿರುವ ಬಸ್‌ ನಿಲ್ದಾಣ ಧ್ವಂಸಗೊಳಿಸಿ ಹೊಸ ನಿಲ್ದಾಣ ನಿರ್ಮಿಸುವ ಯೋಜನೆ ಮತ್ತು ಯೋಚನೆಯನ್ನು ಶಾಸಕ ಕೆ.ನೇಮಿರಾಜ ನಾಯ್ಕ ಮಾಡಿ ₹ 3.5 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು.

ಅನುದಾನ ಬರುತ್ತಿದ್ದಂತೆ ಉತ್ತೇಜನಗೊಂಡ ಬಳ್ಳಾರಿ ವಿಭಾಗೀಯ ಕಾರ್ಯಪಾಲಕ ಅಭಿಯಂತರರ ಕಚೇರಿ ಇದಕ್ಕೆ ಸಂಬಂಧಪಟ್ಟಂತೆ ಟೆಂಡರ್‌ ಪ್ರಕಟಣೆಯನ್ನು ಕಳೆದ ವರ್ಷ ಹೊರಡಿಸಿತ್ತು, ಯಾರು ಟೆಂಡರ್‌ಗೆ ಓಗೂಡದ ಕಾರಣ ಮರು ಟೆಂಡರ್‌ನ್ನು ಸಹ ಕರೆದಿತ್ತು. ಕೊನೆಯ ಟೆಂಡರ್‌ನಲ್ಲಿ ರಾಯಚೂರು ಮೂಲದ ಗುತ್ತಿಗೆದಾರರೊಬ್ಬ ಕೊಟ್ಟೂರು ಬಸ್‌ ನಿಲ್ದಾಣ ನಿರ್ಮಿಸುವ ಕಾಮಗಾರಿ ಪಡೆದು ಇನ್ನೇನು ಪ್ರಾರಂಭ ಮಾಡಬೇಕು ಎಂದು ಯೋಚನೆ ನಡೆಸಿರುವಾಗಲೇ ತಾಂತ್ರಿಕ ಕಾರಣದಿಂದ ಮತ್ತೆ ಟೆಂಡರ್‌ ರದ್ದುಗೊಳಿಸಿ ಪುನಃ ಇತ್ತೀಚಿಗಷ್ಟೆ ಟೆಂಡರ್‌ ಕರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಳ್ಳಾರಿಯ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಬಸ್‌ ನಿಲ್ದಾಣದಲ್ಲಿದ್ದ ಖಾಸಗಿ ಕ್ಯಾಂಟಿನ್‌ ಮತ್ತು ವಾಣಿಜ್ಯ ಮಳಿಗೆಯನ್ನು ನಾಲ್ಕು ತಿಂಗಳ ಹಿಂದೆಯೇ ತೆರವು ಗೊಳಿಸಿದರು. ಪ್ರತಿ ತಿಂಗಳು ಬಾಡಿಗೆ ರೂಪದಲ್ಲಿ ಎರಡು ಮಳಿಗೆಗಳಿಂದ ₹75 ಸಾವಿರಕ್ಕೂ ಹೆಚ್ಚು ಹಣ ಸಂದಾಯವಾಗುತ್ತಿತ್ತು. ಇದೀಗ ತೆರವುಗೊಂಡಿರುವ ಕಾರಣಕ್ಕಾಗಿ ಈ ಆದಾಯವೂ ಸಹ ಸಾರಿಗೆ ಸಂಸ್ಥೆಗೆ ಹೋಗುತ್ತಿಲ್ಲ. ಇದು ನಿರಂತರ ನಷ್ಟದಲ್ಲಿರುವ ಕೆಕೆಆರ್‌ಟಿಸಿ ಸಂಸ್ಥೆಗೆ ಮತ್ತಷ್ಟು ಹೊರೆಯಾಗಿದೆ.

ಈಗಲಾದರೂ ಬಳ್ಳಾರಿಯಲ್ಲಿನ ವಿಭಾಗೀಯ ತಾಂತ್ರಿಕ ವಿಭಾಗದವರು ಕೊಟ್ಟೂರಿನಲ್ಲಿ ಕೂಡಲೇ ಬಸ್‌ನಿಲ್ದಾಣ ಪ್ರಾರಂಭಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಅನುಮೋದನೆ ನೀಡದಿದ್ದರೆ ಬೀದಿಗಿಳಿದು ಈ ಬೇಡಿಕೆ ಈಡೇರಿಸುವಂತೆ ಬಹಿರಂಗ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.

ಕೊಟ್ಟೂರು ಬಸ್‌ ನಿಲ್ದಾಣ ನಿರ್ಮಿಸುವ ಯೋಜನೆಯ ಮಾಹಿತಿ ಬಳ್ಳಾರಿ ತಾಂತ್ರಿಕ ವಿಭಾಗದ ಅಧಿಕಾರಿಗಳು ಇದುವರೆಗೂ ನೀಡದ ಕಾರಣಕ್ಕಾಗಿ ಬಸ್‌ ನಿಲ್ದಾಣ ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಕೆಕೆಆರ್‌ಟಿಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಮ್ಮಾರೆಡ್ಡಿ ಹೇಳಿದರು.

ಬಸ್‌ ನಿಲ್ದಾಣದ ಗೋಳು ಹೇಳತೀರದು, ಮಳೆ ಬಂದಾಗ ಇದು ಕೆರೆಯಾಗಿ ಮಾರ್ಪಡುತ್ತದೆ. ಏನೆಲ್ಲ ಸಮಸ್ಯೆ ಗಳಿದ್ದರೂ ಮುಂದಿನ ವರ್ಷ ಬಸ್‌ ನಿಲ್ದಾಣ ನಿರ್ಮಿಸುತ್ತೇವೆ ಎಂದು ಕಳೆದ ವರ್ಷ ಶಾಸಕರು ಮತ್ತು ಅಧಿಕಾರಿಗಳು ಹೇಳಿದ್ದರು. ಆದರೆ ಇದೀಗ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಕೊಟ್ಟೂರ ನಾಗರಿಕ ಜೆ.ಸಿ.ಚಂದ್ರಶೇಖರ್‌ ಎಂದರು.