ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ರಾಜ್ಯದಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿಸಿಕೊಂಡ ಯಾವುದೇ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ ಅವರ ಕುಟುಂಬಕ್ಕೆ ಕೆಪಿಎ ಆಸರೆ ಯೋಜನೆ ನೆರವಾಗಲಿದೆ ಎಂದು ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸ್ವಾಮಿ ತಿಳಿಸಿದರು.ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಛಾಯಾಗ್ರಾಹರಿಗೆ ಕೆಪಿಎ ಯೋಜನೆಯ ಮಾಹಿತಿ ಇರುವ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಛಾಯಾಗ್ರಾಹರು ₹ 110 ನೀಡಿ ಯೋಜನೆಗೆ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡ ಛಾಯಾಗ್ರಾಹಕರು ಅಕಾಲಿಕ ಮರಣಕ್ಕೆ ತುತ್ತಾದರೆ ಈ ಯೋಜನೆಯಿಂದ 1 ಲಕ್ಷ ರು. ಪರಿಹಾರ ದೊರೆಯಲಿದೆ ಎಂದರು. ರಾಜ್ಯದಲ್ಲಿ ಯಾವುದೇ ಛಾಯಾಗ್ರಾಹಕ ನಿಧನರಾಗಿ ₹1ಲಕ್ಷ ಪರಿಹಾರ ಪಡೆದ ನಂತರ ಮತ್ತೊಬ್ಬ ಛಾಯಾಗ್ರಾಹಕನಿಗೆ ಈ ಯೋಜನೆಯ ಸೌಲಭ್ಯ ಮುಂದುವರಿಸಲು ಈ ಯೋಜನೆಯ ಖಾತೆಗೆ ರಾಜ್ಯದ ಪ್ರತಿಯೊಬ್ಬ ಛಾಯಾಗ್ರಾಹಕನೂ 10 ರು. ಪಾವತಿಸಿದರೆ ಮತ್ತೊಬ್ಬ ಮರಣ ಹೊಂದಿದ ವ್ಯಕ್ತಿಗೆ 1ಲಕ್ಷ ರು. ದೊರೆಯಲಿದೆ. ಈ ಯೋಜನೆ ಯಶಸ್ವಿ ಆದಲ್ಲಿ ಪರಿಹಾರ ಮೊತ್ತವನ್ನು 2 ಅಥವಾ 3 ಲಕ್ಷ ರು.ಗೆ ಹೆಚ್ಚಿಸುವ ಉದ್ದೇಶವಿದೆ ಎಂದರು. ನೋಂದಾಯಿಸಿಕೊಂಡ ಯೋಜನೆ ಅಡಿಯಲ್ಲಿ ಪ್ರತೀ ಛಾಯಾಗ್ರಾಹಕರು ಸಂಘದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದರು.ಆಲೂರು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಲೇಶ್, ಹಾಸನ ಜಿಲ್ಲಾ ಸಹ ಕಾರ್ಯದರ್ಶಿ ಧನ್ಯಕುಮಾರ್‌, ಹೊಳೆನರಸೀಪುರ ತಾಲೂಕು ಸಂಘದ ಅಧ್ಯಕ್ಷ ಸುರೇಶ್, ಹಿರಿಯ ಛಾಯಾಗ್ರಾಹಕರಾದ ಎಚ್. ಕೆ. ನರಸಿಂಹ, ವಿನಾಯಕ, ಚಂದ್ರು, ರವಿ, ಪ್ರಕಾಶ್, ಅರವಿಂದ, ಸೂರಿ, ವೆಂಕಟೇಶ್, ಯೋಗೇಶ್, ಚಿರಂಜೀವಿ, ಅಭಿಷೇಕ್‌, ಕೇಶವ, ಪ್ರಮೋದ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕಗಳ ಛಾಯಾಗ್ರಾಹಕರು ಭಾಗವಹಿಸಿದ್ದರು.