ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ನೌಕರಿ ಎಂದರೆ ಕೈ ಬೀಸಿಕೊಂಡು ಕಚೇರಿಗೆ ಬಂದು ಹೋಗುವುದು ಅಷ್ಟೇನಾ? ಕೆಲಸ ಮಾಡಲಿ, ಮಾಡದಿರಲಿ ಯಾವುದಕ್ಕೂ ಲೆಕ್ಕದ ಅಗತ್ಯವಿಲ್ವಾ? ನೀವೇ ಅನುಷ್ಠಾನಗೊಳಿಸುತ್ತಿರುವ ಯೋಜನೆ ಕುರಿತಾದ ಬೇಸಿಕ್ ಡೇಟಾ ಇಟ್ಟುಕೊಳ್ಳಬಾರದೇ..? ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ ಎಲ್ಇಡಿ ಬೀದಿ ದೀಪ ಅಳವಡಿಕೆ ಕುರಿತು ಮಂಗಳವಾರ ಜಿಬಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮೇಲಿನಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯೋಜನೆ ಕುರಿತು ಮಾಹಿತಿ ಇಲ್ಲದೇ ಸಭೆಗೆ ಬಂದ ಅಧಿಕಾರಿಗಳ ಬಗ್ಗೆ ತೀವ್ರ ಬೇಸರ, ಅಸಮಾಧಾನ ವ್ಯಕ್ತಪಡಿಸಿದರು.ಯೋಜನೆಯ ಬೇಸಿಕ್ ಡೆಟಾ ಇಲ್ಲದಿದ್ದರೆ ಏನು ಮಾಡುತ್ತಿರಾ? ಸಾಮಾನ್ಯ ಪ್ರಶ್ನೆಗೆ ಉತ್ತರ ಇಲ್ಲದಿದ್ದರೆ ಹೇಗೆ? ಸಭೆಗೆ ಸಿದ್ಧತೆ ಮಾಡಿಕೊಂಡು ಬರಬೇಕಲ್ಲವೇ? ಸಭೆಗೆ ಸುಮ್ಮನೇ ಮುಖ ಮುಖ ನೋಡಲು ಬರುವುದಾ? ಬೀದಿ ದೀಪಗಳಿಗೆ ಸಂಬಂಧಿಸಿದಂತೆ 5 ಪಾಲಿಕೆಗಳ ನಡುವೆ ಎಷ್ಟು ವಿದ್ಯುತ್ ಬಿಲ್ ಬರುತ್ತಿದೆ ಎನ್ನುವ ಬೇಸಿಕ್ ಮಾಹಿತಿ ಇಲ್ಲವೇ? ಎಂಜಿನಿಯರ್ಗಳು ನೀವಾದರೂ ಹೇಳಿ ಅಥವಾ ನಾನೇ ಕ್ಯಾಲ್ಕ್ಯುಲೇಟರ್ ಇಟ್ಟುಕೊಂಡು ಒನ್ ಪ್ಲಸ್ ಒನ್ ಲೆಕ್ಕ ಮಾಡಿ ಹೇಳಲೇ? ಎಂದು ಸಚಿವರು ಪ್ರಶ್ನಿಸಿದರು.
ಸಚಿವರ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರೆ ಮುಖ್ಯ ಆಯುಕ್ತರು ಹಾಗೂ ಆಯುಕ್ತರು ಮುಗಮ್ಮಾಗಿ ಕುಳಿತಿದ್ದರು. ಪಿಪಿಟಿ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ಇದರಿಂದ ಅತೃಪ್ತರಾದ ಸಚಿವರು, ಅಧಿಕಾರಿಗಳ ವಿರುದ್ಧ ಅಸಮಾಧಾನ, ಬೇಸರ ವ್ಯಕ್ತಪಡಿಸಿದರು.ಶೇ.24 ದೂರುಗಳು ಬೀದಿ ದೀಪಕ್ಕೆ ಸಂಬಂಧಿಸಿದ್ದು: ಸಹಾಯ ಪೋರ್ಟಲ್ನಲ್ಲಿ ಸ್ವೀಕೃತವಾಗುವ ದೂರುಗಳ ಪೈಕಿ ಶೇ.34ರಷ್ಟು ಬೀದಿ ದೀಪಗಳ ಕುರಿತ ದೂರುಗಳಿವೆ. ಸಾರ್ವಜನಿಕರು ಸಲ್ಲಿಸುವ ದೂರುಗಳನ್ನು 48 ಗಂಟೆಗಳ ಒಳಗಾಗಿ ಪರಿಹರಿಸಬೇಕು. ಕೆಲಸ ನಿರ್ವಹಿಸಲು ವಿಫಲರಾಗುವ ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಎರಡು ತಿಂಗಳಲ್ಲಿ ನಗರದಾದ್ಯಂತ ಎಲ್ಇಡಿ ಬೀದಿ ದೀಪ ಅಳವಡಿಕೆ ಪೂರ್ಣಗೊಳ್ಳಬೇಕು. ದೀಪಗಳ ಕುರಿತು ಜನರ ದೂರುಗಳಿಗೆ 48 ತಾಸಲ್ಲಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಕೃಷ್ಣ ಬೈರೇಗೌಡ, ಸಚಿವ, ಬೆಂಗಳೂರು ನಗರಾಭಿವೃದ್ಧಿ
