ಬೆಳಗಾವಿಯಲ್ಲಿ 22 ರಂದು ವಕೀಲರ ಪ್ರಥಮ ರಾಜ್ಯ ಸಮಾವೇಶ

| Published : Sep 15 2024, 01:50 AM IST

ಸಾರಾಂಶ

ಸೆ. 22 ರಂದು ವಕೀಲರ ಪ್ರಥಮ ರಾಜ್ಯ ಸಮಾವೇಶ

ಕನ್ನಡಪ್ರಭ ವಾರ್ತೆ ಮೈಸೂರುಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಕುರಿತು ಬೆಳಗಾವಿಯಲ್ಲಿ ಸೆ. 22 ರಂದು ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದರು.ಅಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದೆ. ಜತೆಗೆ ಮಧ್ಯಾಹ್ನ 1 ಗಂಟೆಗೆ ಧರಣಿ ನಡೆಸಲಾಗುವುದು. ಅಂದು ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಭಾಗದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮುದಾಯದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶನಿವಾರ ನಗರದ ಹೊಸಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.ಗುಲ್ಬರ್ಗಾ ಭಾಗದ ಸಮುದಾಯ ಮುಖಂಡರು ಮುಖ್ಯಮಂತ್ರಿಗಳನ್ನು ಸೆ. 17ರಂದು ಭೇಟಿಯಾಗಿ ಮನವಿ ಸಲ್ಲಿಸುವರು. ಯಾರೇ ಸಿಎಂ ಆಗಲಿ, ಯಾವುದೇ ಸರ್ಕಾರ ಬರಲಿ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ನಿರಂತರ ಎಂದರು.ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಹೋರಾಟವನ್ನು ವಕೀಲರ ಮೂಲಕ ಪ್ರಾರಂಭಿಸಲಾಗಿದೆ. ಅದರ ಭಾಗವಾಗಿ ಮೈಸೂರಿನಲ್ಲಿ ವಕೀಲರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗುತ್ತಿದೆ. ನಮ್ಮ ಸಮಾಜದ ಜನರ ನ್ಯಾಯಯುತ ಹಕ್ಕಾಗಿರುವ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ವಕೀಲರ ಸಂಘಟನೆ ರಚಿಸಲಾಗಿದೆ. ಈಗ ರಾಜ್ಯವ್ಯಾಪಿ ಸಮಾಜದ ವಕೀಲರನ್ನು ಸಂಘಟಿಸಿದ್ದು, ಈಗಾಗಲೇ ನಾವೆಲ್ಲರೂ ಹೋರಾಡಿದ್ದರೂ, ಸದನದಲ್ಲಿ ಶಾಸಕರು ಮಾತನಾಡಲಿಲ್ಲ. ಅದಕ್ಕಾಗಿ ವಕೀಲರನ್ನು ಸಂಘಟಿಸಿ ಆ ಮೂಲಕ ಒತ್ತಡ ತರಲು ರೂಪರೇಷೆ ಸಿದ್ಧಪಡಿಸಲಾಗಿದೆ ಎಂದರು.ಬೆಳಗಾವಿಯಲ್ಲಿ ವಕೀಲರ ಸಮಾವೇಶದ ಮೂಲಕ ಬೃಹತ್ ಹೋರಾಟ ರೂಪಿಸಲಾಗುವುದು. ಕಾನೂನಾತ್ಮಕವಾಗಿ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲು 10 ಜನ ಹಿರಿಯ ವಕೀಲರ ಸಮಿತಿ ರಚನೆ ಮಾಡಿ ಆ ಮೇಲೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.ಅಧಿವೇಶನದಲ್ಲಿ ಪಂಚಮಸಾಲಿ 2 ಎ ಮೀಸಲಾತಿ ಬಗ್ಗೆ ಮಾತನಾಡುವಂತೆ ನಮ್ಮ ಸಮುದಾಯದ ಎಲ್ಲ ಶಾಸಕರಿಗೆ ತಿಳಿಸಿದ್ದೆ. ಆದರೆ, ಯಾರೂ ಈ ಸಂಬಂಧ ಮಾತನಾಡಿಲ್ಲ. ಕೇಳಿದರೆ ವಿಧಾನಸಭಾ ಅಧ್ಯಕ್ಷರು ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ.ಹಿಂದಿನ ಸರ್ಕಾರ ನಮ್ಮ ಹೋರಾಟಕ್ಕೆ ಭಯ ಪಡುತ್ತಿತ್ತು. ಈಗ ಶಾಸಕರು ಮಾತನಾಡುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಬಿಜೆಪಿಯ ಶಾಸಕರು ಸದನದಲ್ಲಿ ಮಾತನಾಡುತ್ತಿದ್ದರು. ನಮ್ಮ ಸಮಾಜದ ಶಾಸಕರು ಸಭಾತ್ಯಾಗ ಮಾಡಬೇಕಿತ್ತು. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬೇಕಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.