ಸಾರಾಂಶ
ಯುವ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅವರ ‘ನಿಭೃತ’ ಪತ್ತೆದಾರಿ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಗಂಗೊಳ್ಳಿಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪತ್ತೆದಾರಿಯಂತಹ ಕಾದಂಬರಿಗಳನ್ನು ಬರೆಯುವುದು ಯಾವುದೇ ಲೇಖಕನಿಗೆ ಬಹಳ ದೊಡ್ಡ ಸವಾಲು. ಈ ಸವಾಲನ್ನು ನರೇಂದ್ರ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ನಿವೃತ್ತ ಇತಿಹಾಸ ಉಪನ್ಯಾಸಕ ಎಚ್. ಭಾಸ್ಕರ್ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಇಲ್ಲಿನ ಗಂಗೊಳ್ಳಿಯಲ್ಲಿ ನಡೆದ ಯುವ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅವರ ‘ನಿಭೃತ’ ಪತ್ತೆದಾರಿ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಕುಂದಾಪುರದ ಚಿನ್ಮಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಮಾತನಾಡಿ, ಪುಸ್ತಕಗಳು ಜೀವನದ ಬಹು ದೊಡ್ಡ ಗೆಳೆಯರಿದ್ದಂತೆ. ಹಲವು ಸವಾಲುಗಳನ್ನು ಎದುರಿಸುವಲ್ಲಿ ಅಗತ್ಯವಿರುವ ಆತ್ಮವಿಶ್ವಾಸವನ್ನು ಅವು ನೀಡುತ್ತವೆ ಎಂದು ಹೇಳಿದರು.ಉಡುಪಿಯ ಖ್ಯಾತ ವಕೀಲ ಎಚ್. ರಾಘವೇಂದ್ರ ಶೆಟ್ಟಿ, ಸಮಾಜ ಸೇವಕಿ ಮಂಜುಳಾ ದೇವಾಡಿಗ ಗಂಗೊಳ್ಳಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ, ಶೋಭರಾಣಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳಾಡಿದರು. ನಾರಾಯಣ ಈ ನಾಯ್ಕ್ ಪುಸ್ತಕ ಪರಿಚಯಿಸಿದರು.ಗೋಪಾಲ ಚಂದನ್ ಸ್ವಾಗತಿಸಿದರು. ಶ್ರೀಧರ ಗಾಣಿಗ ನಿರೂಪಿಸಿದರು. ಪೃಥ್ವಿ ಮತ್ತು ಮೆಹಕ್ ಸಹಕರಿಸಿದರು. ಜಿ.ಆರ್. ಪ್ರಭಾಕರ್ ಶೇರುಗಾರ ವಂದಿಸಿದರು.