ಉಡುಪಿ: ಪೊಲೀಸ್ ಇಲಾಖೆ ವತಿಯಿಂದ ಫಿಟ್ನೆಸ್ ಜಾಗೃತಿಗಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ನಾಸೀರ್ ಹುಸೇನ್ (59) ಕುಸಿದುಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಪೋಲಿಸ್ ಇಲಾಖೆ ವತಿಯಿಂದ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ-ಎಲ್ಲರಿಗೂ ಫಿಟ್ನೆಸ್ -ಡ್ರಗ್ಸ್ ಫ್ರೀ ಕರ್ನಾಟಕ -ಸೈಬರ್ ಜಾಗೃತಿ’ಗಾಗಿ 5 ಕಿ.ಮೀ. ಮ್ಯಾರಥಾನ್‌ನ್ನು ನಗರದ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್ಐ ನಾಸೀರ್ ಹುಸೇನ್ ಮತ್ತು ಜಿಲ್ಲೆಯ ನೂರಕ್ಕೂ ಅಧಿಕ ಪೊಲೀಸರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಾರಥಾನ್‌ನಲ್ಲಿ ಓಡುತ್ತಿದ್ದ ನಾಸೀರ್ ಹುಸೇನ್ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಅವರು ನಿಧನ ಹೊಂದಿರುವುದಾಗಿ ವೈದ್ಯರು ಘೋಷಿಸಿದರು.ಮೂಲತಃ ಚಿಕ್ಕಮಗಳೂರಿನ ಮೂಡುಗೆರೆ ನಿವಾಸಿಯಾಗಿರುವ ನಾಸೀರ್, ಕುಂದಾಪುರ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಅಮಾಸೆಬೈಲು, ಕುಂದಾಪುರ, ಬೈಂದೂರು, ಕೊಲ್ಲೂರು, ಶಂಕರನಾರಾಯಣದಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗ್ರಾಮಾಂತರ (ಕಂಡ್ಲೂರು) ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾಗಿ ಪೊಲೀಸ್ ಇಲಾಖೆಗೆ ಸೇರಿದ್ದ ಅವರು ಜನಸ್ನೇಹಿ ಅಧಿಕಾರಿಯಾಗಿ ಮೆಚ್ಚುಗೆ ಗಳಿಸಿದ್ದರು.