ಸಾರಾಂಶ
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ. ವಿಭಾಗ ವತಿಯಿಂದ ‘ಯುವ -2025’ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಪೆಸ್ಟ್ನ್ನು ಇತ್ತೀಚಿಗೆ ಆಯೋಜಿಸಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ. ವಿಭಾಗ ವತಿಯಿಂದ ‘ಯುವ -2025’ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಪೆಸ್ಟ್ನ್ನು ಇತ್ತೀಚಿಗೆ ಆಯೋಜಿಸಿತು.ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಸ್ಟೇಲ್ತ್ ಪ್ರೊಡಕ್ಷನ್ ಸಂಸ್ಥಾಪಕ ನಿತಿನ್ ಹೆಗ್ಡೆ ಅವರು ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ ಉಪಯೋಗ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಆ ಕಡೆಗೂ ಗಮನಹರಿಸಿ ಶೀಘ್ರ ಯಶಸ್ಸನ್ನು ಸಾಧಿಸಬೇಕು ಎಂದು ಹೇಳಿದರು. ಐ.ಎಂ.ಜೆ. ಇನ್ಸ್ಟಿಟ್ಯೂಷನ್ಸ್ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗ್ಡೆ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅದ್ಭುತ ಅವಕಾಶ ನೀಡಿದ ಎಂ.ಐ.ಟಿ.ಕೆ.ಯ ಎಂ ಬಿ ಎ ವಿಭಾಗವನ್ನು ಶ್ಲಾಘಿಸಿದರು ಮತ್ತು ಇಂತಹ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿರುವ ಐ.ಎಂ.ಜೆ. ವಿದ್ಯಾಸಂಸ್ಥೆಗಳ ಮುಖ್ಯಸ್ಥ ಸಿದ್ದಾರ್ಥ ಜೆ. ಶೆಟ್ಟಿ ಅವರ ಪ್ರೋತ್ಸಾಹಕ್ಕೆ ಅಭಿವಂದಿಸಿದರು ಹಾಗು ವಿದ್ಯಾರ್ಥಿಗಳನ್ನು ಕಳಿಸಿದ ವಿವಿಧ ಜಿಲ್ಲೆಗಳ ಒಟ್ಟು 16 ಕಾಲೇಜುಗಳ ಪ್ರಾಂಶುಪಾಲರಿಗೆ ವಂದಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಪ್ರೊ. ಅಮೃತಮಾಲಾ ಮಾತನಾಡುತ್ತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಫೆಸ್ಟ್ ಗಳು ಅವಶ್ಯಕ ಅಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜ ಅವರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆಯೇ ಪಾಲ್ಗೊಳ್ಳುವಿಕೆಯೇ ಗೆಲುವು ಎಂದರು.ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಸ್ವಾಗತ ಭಾಷಣ ಮಾಡುತ್ತ ‘ಯುವ -2025‘ರ ಪ್ರಾರಂಭಿಕ ವಿವರಣೆ ನೀಡಿದರು. ವಿದ್ಯಾರ್ಥಿನಿ ಸಹರಾ ಮತ್ತು ಶಾಂಭವಿ ಕಾರ್ಯಕ್ರಮ ನಿರೂಪಿಸಿ, ಪ್ರತಿಕಾ ಶೆಟ್ಟಿ ವಂದಿಸಿದರು.