ಕುಂದಾಪುರ: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಕಾವ್ರಾಡಿ ಗ್ರಾಮದ ಸಾರ್ಕಲ್ಲು ಎಂಬಲ್ಲಿ ಗೌರಿ ದೇವಾಡಿಗ ಎಂಬವರಿಗಾಗಿ ನಿರ್ಮಿಸಿದ, 20ನೇ ಮನೆಯನ್ನು ಮಂಗಳವಾರ ಶಿವಮೊಗ್ಗದ ಶ್ರೀ ಜಾತವೇದ ಸುಕ್ಷೇಮಾಲಯ ದೂರ್ವಾಸ ಕ್ಷೇತ್ರದ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ಹಸ್ತಾಂತರಿಸಿದರುಮುಖ್ಯ ಅತಿಥಿ, ಉದ್ಯಮಿ ಕಿಶನ್ ಹೆಗ್ಡೆ ಮಾತನಾಡಿ, ಗೋವಿಂದ ಬಾಬು ಪೂಜಾರಿಯಂತಹ ನಿಸ್ವಾರ್ಥ ಹೃದಯವುಳ್ಳವರು ಸಮಾಜದಲ್ಲಿ ಬಹಳ ವಿರಳ, ಕೇವಲ ಹಣವಿದ್ದವರು ಶ್ರೀಮಂತರಲ್ಲ, ಪರರಿಗೆ ಸಹಾಯ ಮಾಡುವ ಗುಣ ಇರುವವರು ಮಾತ್ರ ಶ್ರೀಮಂತರು, ಅಂತಹ ಶ್ರೀಮಂತ ಗೋವಿಂದ ಪೂಜಾರಿ ಅವರಂತಹವರಿಂದ ಮಾತ್ರ ಸಮಾಜ ಉದ್ಧಾರವಾಗಲು ಸಾಧ್ಯ ಎಂದು ಶ್ಲಾಘಿಸಿದರು. ಬೈಂದೂರು ದೇವಾಡಿಗ ಸಂಘದ ಅಧ್ಯಕ್ಷ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ರಘುರಾಮ್ ದೇವಾಡಿಗ ಮತ್ತು ಪ್ರಗತಿಪರ ಕೃಷಿಕ ಮುಂಬಾರು ದಿನಕರ ಶೆಟ್ಟಿ ಅವರು ಗೋವಿಂದ ಪೂಜಾರಿ ಕಾರ್ಯವನ್ನು ಕೊಂಡಾಡಿದರು.ವರ ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ, ದಾನಿ ಗೋವಿಂದ ಬಾಬು ಪೂಜಾರಿ ಅವರು ಮಾತನಾಡುತ್ತಾ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಕೂಡ ನಮ್ಮ ಟ್ರಸ್ಟ್‌ ವತಿಯಿಂದ ಸೇವೆ ಸಿಗಬೇಕೆನ್ನುವುದು ನಮ್ಮ ಆಶಯ, ಆ ಕಾರಣದಿಂದಲೇ ಇವತ್ತಿಗೆ 20ನೇ ಮನೆಯನ್ನು ಗೃಹಪ್ರವೇಶ ಹಸ್ತಾಂತರಿಸಿದ್ದೇವೆ, ಮುಂದೆ ಕೂಡ ನಮ್ಮ ಈ ಸೇವೆ ಮುಂದುವರಿಯುತ್ತದೆ ಎಂದರುಧರ್ಮದರ್ಶಿ ಪ್ರಭಾಕರ್ ಶೆಟ್ಟಿ, ಮನೋಹರ ಶೆಟ್ಟಿ. ನಿವೃತ್ತಿ ಶಿಕ್ಷಕ ಬಾಲಚಂದ್ರ ಶೆಟ್ಟಿ, ಟ್ರಸ್ಟಿ ನಾಗರಾಜ್ ಪಿ. ಯಡ್ತರೆ. ಮಾಜಿ ಜಿಪಂ ಸದಸ್ಯೆ ಗೌರಿ ದೇವಾಡಿಗ, ನಿವೃತ್ತ ಬ್ಯಾಂಕ್ ಅಧಿಕಾರಿ ಸೂರ್ಯ ಪೂಜಾರಿ ಮತ್ತಿತರರಿದ್ದರು. ಸುಬ್ರಮಣ್ಯ ಜಿ. ಉಪ್ಪಂದ ನಿರೂಪಿಸಿದರು.