ಸಾರಾಂಶ
ಹೊನ್ನಾಳಿ: ಮಧ್ಯ ಕರ್ನಾಟಕದಲ್ಲಿಯೇ ಐತಿಹಾಸಿಕ ಹಿನ್ನೆಲೆ ಇರುವ ಸಹಸ್ರಾರು ಭಕ್ತರನ್ನು ಹೊಂದಿರುವ ತಾಲೂಕಿನ ಕುಂದೂರು ಗ್ರಾಮದ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಮುಜರಾಯಿಗೆ ಸೇರಿರುವ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸನಾತನ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳ ಅನುಸಾರ ಅದ್ಧೂರಿಯಿಂದ ನಡೆಯಿತು.
ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳು ಮುಗಿದ ನಂತರ ಭಕ್ತರು ರಥವನ್ನು ಎಳೆದು ಘೋಷಣೆಗಳನ್ನು ಕೂಗಿದರು.ಸಾವಿರಾರು ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡು ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ನೂರಾರು ಭಕ್ತರು ಗರ್ಭಗುಡಿಯ ಮುಂಭಾಗದಲ್ಲಿ ಉರುಳುಸೇವೆ ಮಾಡಿದರು.ಬ್ರಹ್ಮರಥೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಮಾರುತಿ ಯುವಕ ಸಂಘದ ದಾಸೋಹದ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಿದರು. ಬೆಳಗ್ಗೆಯಿಂದಲೇ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಗ್ರಾಮದ ಪ್ರತಿ ಮನೆಗಳನ್ನು ಹಸಿರು ತೋರಣಗಳಿಂದ ಸಿಂಗರಿಸಿ ವಿವಿಧ ಬಗೆಯ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಗ್ರಾಮದ ಯುವಭಕ್ತನೊಬ್ಬ ಬಾಳೆ ಹಣ್ಣಿನಲ್ಲಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂದು ಬರೆದು ರಥೋತ್ಸವಕ್ಕೆ ಎಸೆದು ಪ್ರಾರ್ಥಿಸಿದರು.ಬ್ರಹ್ಮರಥೋತ್ಸವಕ್ಕೆ ಅಸಂಖ್ಯಾತ ಭಕ್ತರು ಬಂದಿದ್ದರಿಂದ ಯಾವುದೇ ಅವಘಡ ಸಂಭವಿಸಬಾರದೆಂದು ಪೊಲಿಸ್ ಇನ್ಸ್ಪೆಕ್ಟರ್ ಮುದ್ದುರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ.ಶೇಖರಪ್ಪ, ಉಪತಹಸೀಲ್ದಾರ್ ಮಂಜುನಾಥ್ ಇಂಗಳಗೊಂದಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಗದೀಶ್, ಪ್ರಧಾನ ಅರ್ಚಕ ಶ್ರೀನಿವಾಸ್, ಪೀಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಗುರುರಾಜ್ ಪಾಟೀಲ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಚಿದಾನಂದ ಮೂರ್ತಿ, ರೇಖಾ, ಮಾಜಿ ಅಧ್ಯಕ್ಷ ಧನಂಜಯ, ರಹಮತ್ ಉಲ್ಲಾಖಾನ್, ತಾಪಂ ಮಾಜಿ ಉಪಾಧ್ಯಕ್ಷ ತಿಪ್ಪೇಶಪ್ಪ ಹಾಗೂ ಇತರರು ಇದ್ದರು.