ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಕುಶಾಲನಗರದಲ್ಲಿ ಕೋಮುವಾದದ ವಿರುದ್ಧ ಸೌಹಾರ್ದ ನಡಿಗೆ ನಡೆಯಿತು.ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷ ಖಮರುದ್ದೀನ್ ಅನ್ವಾರಿ ಸಖಾಫಿ ನೇತೃತ್ವದಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಹಾಗೂ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದರ ಪ್ರಾರ್ಥನೆಯೊಂದಿಗೆ ತಾವರೆಕೆರೆಯಿಂದ ಸೌಹಾರ್ದ ನಡಿಗೆ ಪ್ರಾರಂಭಗೊಂಡು ಪಟ್ಟಣದ ಕಾರು ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಮಿತಿ ರಾಜ್ಯಾಧ್ಯಕ್ಷ ಮೌಲಾನಾ ಹಫೀಝ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ಮಾಡಿ, ಭಾರತ ದೇಶವು ಹಲವು ಧರ್ಮಗಳ ಬೀಡಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ. ಧರ್ಮಗಳಿಗೆ ಬೆಲೆ ಕೊಟ್ಟು ಧರ್ಮಾಂಧತೆಯನ್ನು ದೂರಗೊಳಿಸಲು ಕರೆ ನೀಡಿದರು.ರಾಜಕಾರಣಿಗಳು ಸಮಾಜದ ಅಭಿವೃದ್ಧಿಯತ್ತ ಚಿಂತೆ ಮಾಡಬೇಕು, ಧರ್ಮಗುರುಗಳು ಧಾರ್ಮಿಕ ನೆಲೆ ಕಾಪಾಡಬೇಕು. ದೇಶದ ಎಲ್ಲೆಡೆ ಕೋಮು ದ್ವೇಷ ಹರಡುವ ಕೆಲಸವನ್ನು ಸ್ಥಗಿತಗೊಳಿಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮಿಜಿ ಮಾತನಾಡಿ, ಮನುಷ್ಯರು ವೈಜ್ಞಾನಿಕವಾಗಿ ಉನ್ನತಿಯತ್ತ ಸಂಚರಿಸುತ್ತಿದ್ದು, ಈ ನಡುವೆ ಮನುಷ್ಯರಿಂದ ಮಾನವೀಯತೆ ಮರೀಚಿಕೆಯಾಗುತ್ತಿರುವುದು ಬೇಸರದ ವಿಷಯ. ಇಂತಹ ಸಂದರ್ಭದಲ್ಲಿ ಎಸ್ಸೆಸ್ಸೆಫ್ನ ಈ ಸೌಹಾರ್ದ ನಡಿಗೆ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ನಾಯಕರಾದ ದಾಮೋದರ್, ಜಿಲ್ಲಾ ಸಾಂಘಿಕ ನಾಯಕರಾದ ಸಯ್ಯಿದ್ ಮಹ್ದಿ ತಂಙಳ್ ಲಕ್ಷದ್ವೀಪ್, ಲತೀಫ್ ಸುಂಟಿಕೊಪ್ಪ, ಇಸ್ಮಾಯಿಲ್ ಸಖಾಫಿ, ಮುಹಮ್ಮದ್ ಹಾಜಿ, ಉಮರ್ ಸಖಾಫಿ, ಮುಸ್ತಫ ಸಖಾಫಿ, ಮುನೀರ್ ಮಹ್ಳರಿ, ಯಾಕೂಬ್ ಮಾಸ್ಟರ್, ಅಬ್ದುಲ್ಲಾ ಸಖಾಫಿ, ಮೊಯ್ದಿನ್ ಬಾಳುಗೋಡು, ಹುಸೈನ್ ಕುಶಾಲನಗರ, ಮುಜೀಬ್ ಕೊಂಡಂಗೇರಿ, ಹಂಝ ಮಾನಿ, ಅಬ್ದುಲ್ಲ ಮದನಿ, ಇರ್ಷಾದ್ ಹಾಜಿ, ಝುಬೈರ್ ಕೂಡಿಗೆ ಉಪಸ್ಥಿತರಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ನೆಲ್ಯಹುದಿಕೇರಿ ಸ್ವಾಗತಿಸಿ, ಇಬ್ರಾಹಿಂ ಮಾಸ್ಟರ್ ವಂದಿಸಿದರು.