ಕುಶಾಲನಗರ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಶಿಖರ ಅಭಿಷೇಕ ಸಂಪನ್ನವಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಆರ್ಯವೈಶ್ಯ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಶಿಖರ ಅಭಿಷೇಕ ಸಂಪನ್ನವಾಯಿತು. ದೇವಾಲಯದಲ್ಲಿ ಬೆಳಗ್ಗೆ ಗಣ ಹೋಮ, ದೇವಿಗೆ ಕಲಾತತ್ವ ಹೋಮ, ಪ್ರಧಾನ ಹೋಮ ಪಂಚಾಮೃತ ಪೂರ್ವ ದ್ರವ್ಯ ಕಲಶಾಭಿಷೇಕ, ನಂತರ ಬ್ರಹ್ಮ ಕುಂಭಾಭಿಷೇಕ ನಡೆಯಿತು. ನಂತರ ಆರ್ಯವೈಶ್ಯ ಸಮುದಾಯ ಬಾಂಧವರು, ವಿಶೇಷ ಆಹ್ವಾನಿತರು, ಸ್ಥಳೀಯ ಪ್ರಮುಖರು ಶಿಖರ ಅಭಿಷೇಕದಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡರು. ಇದೇ ಸಂದರ್ಭ ವಾಸವಿ ಮಹಲ್ ಸಭಾಂಗಣದಲ್ಲಿ ಆರ್ಯವೈಶ್ಯ ಮಂಡಳಿ ಪ್ರಮುಖರಿಂದ ಅನ್ನಪೂರ್ಣೇಶ್ವರಿ ಪೂಜಾ ಕಾರ್‍ಯಕ್ರಮ ನೆರವೇರಿತು. ಶ್ರೀಗಳು ಸಮುದಾಯ ಬಾಂಧವರು ಹಾಗೂ ಭಕ್ತಾದಿಗಳಿಗೆ ಪ್ರಸಾದ ನೀಡುವ ಮೂಲಕ ಆಶೀರ್ವದಿಸಿದರು. ನಂತರ ದೇವಾಲಯದಲ್ಲಿ ಮಹಾಪೂಜೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ನೆರೆದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ವೇದಬ್ರಹ್ಮ ಲಕ್ಷ್ಮಿ ಪ್ರಸಾದ್ ಸಾಂತಿಯಾರ್, ಕೆಜಿ ಯೋಗೇಶ್ ಭಟ್, ಜೆ.ಆರ್. ಗಿರೀಶ್ ಭಟ್ ನೇತೃತ್ವದ ಅರ್ಚಕರ ತಂಡದಿಂದ ಧಾರ್ಮಿಕ ಪೂಜಾ ಕಾರ್‍ಯಕ್ರಮಗಳು ಜರುಗಿದವು.ಧಾರ್ಮಿಕ ಕಾರ್‍ಯಕ್ರಮಕ್ಕೆ ವಿಶೇಷ ಆಹ್ವಾನಿತರಾದ ವಿಧಾನ ಪರಿಷತ್ ಸದಸ್ಯಡಿ.ಎಸ್. ಅರುಣ್, ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ. ಸುಧೀಂದ್ರ, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್, ಉದ್ಯಮಿ ಎಸ್.ಎಲ್.ಎನ್. ವಿಶ್ವನಾಥನ್, ಕರ್ನಾಟಕ ಆರ್ಯವೈಶ್ಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಂಜೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ನಗರದ ಮುಖ್ಯ ಬೀದಿಗಳಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಭವ್ಯ ಮೆರವಣಿಗೆ ನಡೆಯಿತು.ಆರ್ಯವೈಶ್ಯ ಮಂಡಳಿ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮತ್ತು ವಾಸವಿ ಯುವಜನ ಸಂಘ ಮಹಿಳಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.