ಕನ್ನಡಪ್ರಭ ವಾರ್ತೆ ಮೈಸೂರು

ಕಾರ್ಮಿಕ ಇಲಾಖೆಯು ಕಾರ್ಮಿಕ ಸ್ನೇಹಿಯಾಗಿರದೇ ಉದ್ಯೋಗದಾತರ ಸ್ನೇಹಿಯಾಗಿದೆ ಎಂದು ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್‌.ಆರ್‌. ಶೇಷಾದ್ರಿ ಕಿಡಿಕಾರಿದರು.

ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಗ್ರೆಸ್‌ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಶುಕ್ರವಾರ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಕಾನೂನುಗಳ ಅನುಷ್ಠಾನದ ಹೆಸರಿನಲ್ಲಿ ಸಂವಿಧಾನ ನೀಡಿರುವ ಹಕ್ಕುಗಳನ್ನೇ ಹಿಂಪಡೆಯುತ್ತಿರುವುದು ವಿಷಾದನೀಯ. ಬ್ರಿಟಿಷರ ಕಾಲದಲ್ಲಿ ಕಾರ್ಮಿಕರ ಅಧ್ಯಯನ ನಡೆಸಿ, ಗೌರವಯುತ ಹಣ, ಕನಿಷ್ಠ ವೇತನ, ಕೆಲಸದ ಸಮಯ ನಿರ್ಣಯವಾಗಬೇಕು. ಹೀಗಾಗಿ 1926ರ ಟ್ರೇಡ್‌ ಯೂನಿಯನ್‌ ಕಾಯ್ದೆಯಲ್ಲಿ ಆ ಅಂಶ ಅಡಕವಾಗಿತ್ತು. ಆದರೆ ಈಚೆಗೆ ಕಾರ್ಮಿಕರ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ. ಸಂಘಟನೆ ಕಟ್ಟುವು, ಪ್ರತಿಭಟನೆ ನಡೆಸಿ ನ್ಯಾಯ ಕೇಳುವವರ ಧೈರ್ಯ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಬಂಡವಾಳಗಾರರಿಗೆ ಸರ್ಕಾರ ಸಹಾಯ ಮಾಡುತ್ತಿದೆ. ಕಾರ್ಮಿಕರ ಹಕ್ಕು ಕಸಿದುಕೊಳ್ಳುತ್ತಿವೆ. ಕಾರ್ಮಿಕರ ರಕ್ಷಣಗೆ ಪ್ರಬಲ ಹೋರಾಟವೊಂದೇ ದಾರಿ. ಹೊಸ ಕಾರ್ಮಿಕ ಕಾಯ್ದೆಯಲ್ಲಿ ಶೇ 80 ರಷ್ಟು ಹಳೇ ಕಾನೂನು ಮುಂದುವರೆಸಲಾಗಿದೆ. ಉಳಿದ ಸೇರ್ಪಡೆಗಳು ಕಾರ್ಮಿಕರು ಹಲವಾರು ವರ್ಷದ ಹೋರಾಟದ ಫಲವಾಗಿ ಪಡೆದ ಹಕ್ಕು ಮತ್ತು ಸೌಲಭ್ಯಗಳಿಗೆ ಪೆಟ್ಟು ನೀಡುತ್ತಿದೆ ಎಂದರು.


ಪ್ರಸ್ತುತ ಖಾಸಗೀಕರಣ ಪರ್ವ ನಡೆಯುತ್ತಿದೆ. ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಗುತ್ತಿಗೆ ಆಧಾರಿತವಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗ ಸೃಷ್ಟಿ ಆಗದೆ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಕೆಳ ವರ್ಷಗಳಿಂದ ಕಾರ್ಮಿಕರ ನಿಜವಾದ ವೇತನ ಶೇ 13 ರಿಂದ ಶೇ 8 ಕ್ಕೆ ಇಳಿದಿದೆ. ಹೀಗಾಗಿ ಅವರ ಜೀವನ ಮಟ್ಟ ಕುಸಿದಿದೆ. ಆದರೆ ಕಾರ್ಪೊರೇಟ್‌ ಲಾಭ ಶೇ. 23ರಷ್ಟು ಹೆಚ್ಚಾಗಿದೆ. ಆಳುವ ಸರಕಾರ, ಆಡಳಿತ ವರ್ಗಗಳು ಯಾರ ಪರವಾಗಿದೆ ಎಂಬುದಕ್ಕೆ ಈ ಅಂಕಿ-ಅಂಶ ನಿದರ್ಶನ’ ಎಂದು ತಿಳಿಸಿದರು.

ಯುದ್ಧದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಆದಾಯದ ಮೂಲ ಕಡಿಮೆಯಾಗಿದೆ. ಆಟೊ ಚಾಲಕರು, ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದು, ಅವರನ್ನು ಕಾಪಾಡುವವರು ಯಾರು ಎಂಬ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ದುಡಿಯುವ ವರ್ಗದಲ್ಲಿ ಕಾರ್ಮಿಕ ಪ್ರಜ್ಣೆ ಹೆಚ್ಚಬೇಕು ಎಂದು ಅವರು ಕಿವಿಮಾತು ಹೇಳಿದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷೆ ಟಿ.ಸಿ. ರಮಾ, ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಪಿ.ಎಸ್‌. ಸಂಧ್ಯಾ, ಜಯರಾಂ ಕಂದೇಗಾಲ, ಸಿಐಟಿಯು ಮುಖಂಡರಾದ ಅಪ್ಪಣ್ಣ, ದೇವದಾಸ್‌, ಸಂಧ್ಯಾ.ಪಿ.ಎಸ್, ಎಐಟಿಯುಸಿ ಜಿಲ್ಲಾ ಮುಖಂಡ ಜಗನ್ನಾಥ್‌ ಇದ್ದರು.