ಬ್ಯಾಡಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಹಿರಿಯ ನಾಗರಿಕರಿಗೆ ಸಹಾಯ ಯೋಜನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು 180 ಜನರಿಗೆ ತಪಾಸಣೆ ನಡೆಸಲಾಯಿತು.

ಬ್ಯಾಡಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ, ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಜಯಾನಂದ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ಇಲಾಖೆ ಮತ್ತು ಸಬಲೀಕರಣ ಇಲಾಖೆ, ರಾಷ್ಟ್ರೀಯ ವಯೋಶ್ರಿ ಯೋಜನೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಹಿರಿಯ ನಾಗರಿಕರಿಗೆ ಸಹಾಯ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆನಂತರ ಅವರು ಮಾತನಾಡಿದರು. ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೊರತೆಯಿದೆ, ಅವುಗಳ ಬಗ್ಗೆ ಮನೆ ಮನೆಗೆ ಮಾಹಿತಿ ದೊರಕಿಸಿಕೊಡುವ ಕಾರ್ಯ ಮಾಡಬೇಕಿದೆ ಎಂದರು.

ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ಮಾತನಾಡಿ, ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಿದೆ. ವಯಸ್ಸಾದಂತೆ ಬರುವ ದೀರ್ಘಕಾಲದ ಹಾಗೂ ವಯೋಸಹಜ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ, ಕೀಲುನೋವು, ಕಣ್ಣು-ಕಿವಿ ಸಮಸ್ಯೆ ಸೇರಿದಂತೆ ದೇಹದ ಅಂಗಾಂಗಳ ಆರೋಗ್ಯ ಕಾಪಾಡಿಕೊಳ್ಳುವತ್ತ ಹಾಗೂ ಶುಚಿಯಾದ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಸೇವನೆ ಮಾಡುವತ್ತ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಒಟ್ಟು 180 ಜನರಿಗೆ ತಪಾಸಣೆ ನಡೆಸಲಾಯಿತು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ, ಡಾ. ಅಂಕಿತ, ಡಾ. ನಾಗರಾಜ. ಡಾ. ಚೇತನ್. ಡಾ. ಸುರೇಶ ಗುಂಡಪಲ್ಲಿ, ಡಾ. ವೀರೇಶ, ಅಂಗವಿಕಲರ ಸಂಘದ ಅಧ್ಯಕ್ಷ ಪಾಂಡುರಂಗ ಸುತಾರ, ಕೃತಕ ಕಾಲು ಜೋಡಣೆ ಜೀಗಿಶಾ ಪಟೇಲ, ಡಾ. ಅಂಕಿತ, ಡಾ. ಪೂರ್ಣಿಮಾ, ವಿಕಲಚೇತನರ ಜಿಲ್ಲಾ ಕಲ್ಯಾಣಾಧಿಕಾರಿ ಅಂಶು ನದಾಫ್, ಎಂ.ಆರ್.ಡಬ್ಲೂ. ನಾಗರಾಜ ಭಾಗವಹಿಸಿದ್ದರು.