ಕನ್ನಡಪ್ರಭ ವಾರ್ತೆ ಮೈಸೂರುಕುವೆಂಪುನಗರದ ಹೃದಯಭಾಗದಲ್ಲಿ ಹದಿಮೂರು ವರ್ಷಗಳ ಹಿಂದೆ ಸ್ಥಾಪಿತವಾಗಿ, ನಿರ್ವಹಣೆ ಕೊರತೆಯಿಂದ ಸದ್ಯ ಎಲ್ಲ ದೃಷ್ಟಿಯಲ್ಲೂ ಕತ್ತಲಲ್ಲಿ ಮುಳುಗಿರುವ ಕುವೆಂಪು ಜ್ಞಾನ ತಾಣ'' ಮತ್ತು ಅದರ ಎದುರಿನ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ. ಶಿವಕುಮಾರ ಸ್ವಾಮೀಜಿ ವೃತ್ತಗಳನ್ನು ಅರ್ಥಪೂರ್ಣವಾಗಿ ಅಭಿವೃದ್ಧಿ ಪಡಿಸುವಂತೆ ನಗರಪಾಲಿಕೆ ಆಡಳಿತಯನ್ನು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಒತ್ತಾಯಿಸಿದ್ದಾರೆ.ಕುವೆಂಪು ಅವರ ಭವ್ಯ ಪ್ರತಿಮೆ, ಪ್ರತಿಮೆಯ ಕೆಳಗಿನ ಸ್ಥಳದಲ್ಲಿ ಗ್ರಂಥಾಲಯ, ಕಿರು ಉದ್ಯಾನವನ್ನೊಳಗೊಂಡು ನಿರ್ಮಾಣವಾದ ಜ್ಞಾನ ತಾಣವನ್ನು 2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಗ್ರಂಥಾಲಯ ಇಲಾಖೆ ವಾಚನಾಲಯ ಆರಂಭಿಸಿತ್ತು. ಮಕ್ಕಳು,ಹಿರಿಯರುಸಹಿತ ಎಲ್ಲ ವಯೋಮಾನದ ಆಸಕ್ತರು ನಿಗದಿತ ಸಮಯದಲ್ಲಿ ಬಂದು ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದರು. ನಳನಳಿಸುತ್ತಿದ್ದ ಕಿರು ಉದ್ಯಾನದಲ್ಲಿ ನಡೆದು, ಪಕ್ಕದ ಕಲ್ಲು ಬೆಂಚುಗಳ ಮೇಲೆ ಕೂರುತ್ತಿದ್ದ ಹಿರಿಯ ನಾಗರಿಕರು ಸಂಜೆಗಳನ್ನು ಆಹ್ಲಾದಕರವಾಗಿ ಕಳೆಯುತ್ತಿದ್ದರು.ಆದರೆ, ಇತ್ತೀಚಿನ ವರ್ಷಗಳಲ್ಲಿ ಸೂಕ್ತ ನಿರ್ವಹಣೆಯ ಕೊರತೆಯಿಂದ ಈ ಸ್ಥಳ ಬಿಕೋ ಎನ್ನುತ್ತಿದೆ. ಉದ್ಯಾನ ಸೊರಗಿ ಹೋಗಿದೆ. ವಾಚನಾಲಯ ಮುಚ್ಚಿದೆ. ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಮಿನಿ ಕಾರಂಜಿಯಲ್ಲಿ ನೀರುಚಿಮ್ಮುತ್ತಿಲ್ಲ. ಅಕ್ಕ ಪಕ್ಕದಲ್ಲಿ ಬೃಹತ್ ಜಾಹೀರಾತು ಫಲಕಗಳು ಅವತರಿಸಿ, ಈ ತಾಣದ ಅಳಿದುಳಿದ ಸೌಂದರ್ಯವನ್ನು ಮರೆ ಮಾಚಿವೆ. ಕುವೆಂಪು ಜನ್ಮದಿನಾಚರಣೆ, ನೆನಪಿನ ದಿನಗಳಂದು ಇಲ್ಲಿಗೆ ಬಂದು ಪ್ರತಿಮೆಗೆ ಹಾರ ಹಾಕಲು ಮೇಲಾಟ ನಡೆಸುವ ಅಧಿಕಾರಸ್ಥಜನರು ಈ ತಾಣದ ಯೋಗ್ಯ ನಿರ್ವಹಣೆ, ಸದ್ಬಳಕೆ ವಿಷಯದಲ್ಲಿ ಗಮನ ಹರಿಸುತ್ತಿಲ್ಲ. ಅನೇಕ ಬಾರಿ ಸಂಬಂಧ ಪಟ್ಟವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.ಈ ತಾಣದ ಎದುರಿನ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಅಭಿವೃದ್ಧಿ ಕೆಲಸವೂ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೊದಲು ಗುತ್ತಿಗೆ ಪಡೆದವರು ಸುಗಮ ಸಂಚಾರಕ್ಕೆ ವ್ಯತ್ಯಯ ಆಗುವ ರೀತಿಯಲ್ಲಿ ಅವೈಜ್ಞಾನಿಕ ಕೆಲಸ ಮಾಡಿದ್ದು ಆಕ್ಷೇಪಕ್ಕೆ ಕಾರಣವಾಯಿತು. ನಂತರ ಬೇರೆಯವರಿಗೆ ಗುತ್ತಿಗೆ ನೀಡಲಾಯಿತು. ವೃತ್ತದ ಮಧ್ಯದಲ್ಲಿ ಕಟ್ಟಿದ,ವಾಹನ ಚಾಲಕರ ದೃಷ್ಟಿಗೋಚರಕ್ಕೆ ತಡೆ ಒಡ್ಡುವ ಎತ್ತರದ ಕಟ್ಟೆಯು ಈಗಲೂ ಸಮಸ್ಯಾತ್ಮಕ ಸ್ಥಿತಿಯಲ್ಲಿದೆ. ಬೇರೆ ಯಾವ ಅಭಿವೃದ್ಧಿಯೂ ಇಲ್ಲಿ ಆಗಿಲ್ಲ.ರಾಷ್ಟ್ರಕವಿ ಡಾ. ಕುವೆಂಪುಮತ್ತು ಸಿದ್ಧಗಂಗೆಯ ಸಿದ್ಧಪುರುಷ ಡಾ. ಶಿವಕುಮಾರ ಸ್ವಾಮೀಜಿ ಈ ಇಬ್ಬರೂ ಕರ್ನಾಟಕದ, ಅಷ್ಟೇ ಏಕೆ ಈ ದೇಶ ಕಂಡ ಮಹಾನ್ ಚೇತನಗಳು. ಒಬ್ಬರು ಸಾಹಿತ್ಯ ಕೈಂಕರ್ಯದ ಮೂಲಕ ನಾಡಿನ ಪ್ರಜ್ಞೆಯನ್ನು ರೂಪಿಸಿದ ಜ್ಞಾನ ದಾಸೋಹಿ. ಮತ್ತೊಬ್ಬರು ಅನ್ನ,ಜ್ಞಾನ ದಾಸೋಹ - ಕಾಯಕದ ಮೂಲಕ ಲಕ್ಷಾಂತರ ಮಕ್ಕಳ ಬದುಕಿನಲ್ಲಿ ಬೆಳಕನ್ನು ಪಸರಿಸಿದ ಸರ್ವಶ್ರೇಷ್ಠ ಸಂತ. ಈ ಇಬ್ಬರ ಧೀಮಂತ ಬದುಕನ್ನು, ಅವರು ಭಿತ್ತಿ, ಬೆಳೆಸಿದ ವಿಚಾರ, ಆದರ್ಶ, ಮಾನವೀಯ ಮೌಲ್ಯಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ, ಕುವೆಂಪು ಜ್ಞಾನ ತಾಣ ಮತ್ತು ಅದರ ಎದುರು ನಿರ್ಮಿಸಲುದ್ದೇಶಿಸಿರುವ ಶಿವಕುಮಾರ ಸ್ವಾಮೀಜಿ ವೃತ್ತ ಎರಡನ್ನೂ ಸುಗಮ ಸಂಚಾರಕ್ಕೆ ವ್ಯತ್ಯಯ ಆಗದಂತೆ, ಯೋಗ್ಯವಾಗಿ ಸಮನ್ವಯಗೊಳಿಸಿ ಅಭಿವೃದ್ಧಿಪಡಿಸುವುದು ಸಾಧ್ಯವಾದರೆ ಈ ಇಬ್ಬರು ಮಹಾ ಚೇತನಗಳಿಗೆ ಮೈಸೂರು ನಗರ ಸಾರ್ಥಕ ಗೌರವ ಸಲ್ಲಿಸಿದಂತಾಗುತ್ತದೆ. ಅದು ಹೇಗಿರಬೇಕು ಎನ್ನುವುದಕ್ಕೆ ಕಾಳಜಿಯುಳ್ಳ ಜನರ, ತಜ್ಞರ ಸಲಹೆಯನ್ನು ಪಡೆಯಬಹುದು. ಏಪ್ರಿಲ್ ನಲ್ಲಿ ನಡೆಯುವ ಸ್ವಾಮೀಜಿ ಜನ್ಮದಿನಾಚರಣೆ ಕಾರ್ಯಕ್ರಮದೊಳಗೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸಿ, ಕಾರ್ಯೋನ್ಮುಖರಾಗುವಂತೆ ಸಬಂಧಪಟ್ಟವರಲ್ಲಿ ಅವರು ಕೋರಿದ್ದಾರೆ.
ಕುವೆಂಪು ಜ್ಞಾನ ತಾಣ, ಶಿವಕುಮಾರ ಸ್ವಾಮೀಜಿ ವೃತ್ತ ''''''''ಸಮನ್ವಯ ಅಭಿವೃದ್ಧಿ ಪಡಿಸಿ
ನಳನಳಿಸುತ್ತಿದ್ದ ಕಿರು ಉದ್ಯಾನದಲ್ಲಿ ನಡೆದು, ಪಕ್ಕದ ಕಲ್ಲು ಬೆಂಚುಗಳ ಮೇಲೆ ಕೂರುತ್ತಿದ್ದ ಹಿರಿಯ ನಾಗರಿಕರು ಸಂಜೆಗಳನ್ನು ಆಹ್ಲಾದಕರವಾಗಿ ಕಳೆಯುತ್ತಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.