ಬಸವೇಶ್ವರ, ಹೇಮರಡ್ಡಿ ಮಲ್ಲಮ್ಮಜಯಂತಿಯಲ್ಲಿ ಮಂಜುನಾಥ್

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಜಾಗತೀಕರಣದ ಪ್ರಭಾವದಿಂದಾಗಿ ಯುವಸಮೂಹ ಸಂಘಟನೆ ಮತ್ತು ಸಮಾಜದ ಗುರುತರ ಜವಾಬ್ದಾರಿಗಳಿಂದ ವಿಮುಖರಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಜಾಗೃತಿ ಮೂಲಕ ಇದನ್ನು ಸರಿಪಡಿಸಬೇಕಿದೆ ಎಂದು ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ.ಮಂಜುನಾಥ್ ಹೇಳಿದರು.

ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ವೀರಶೈವ ಸಮಾಜ, ವೀರಶೈವ ಯುವಕ ಸಂಘ ಹಾಗೂ ವೀರಶೈವ ಮಹಿಳಾ ಘಟಕ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮಜಯಂತ್ಯುತ್ಸವದಲ್ಲಿ ಮಾತನಾಡಿದರು.

ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಬಸವಣ್ಣನವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅನುಭವ ಮಂಟಪದ ಮೂಲಕ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿ ಜಾತಿಯತೆ ನಿರ್ಮೂಲನಕ್ಕೆ ಅವಿರತವಾಗಿ ಹೋರಾಡಿದ್ದರು. ಯುವ ಸಮೂಹದ ಸಂಘಟನೆ ಕೊರತೆ ಕಾಡುತ್ತಿದೆ. ಯುವಕರನ್ನು ಜಾಗೃತರಾಗಬೇಕು. ಸಮುದಾಯವನ್ನು ಸಂಘಟಿಸುವ ಕೆಲಸವಾಗಬೇಕು ಎಂದರು.

ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಸಮಾನತೆಯ ಸಂದೇಶ ಹಾಗೂ ಮಲ್ಲಮ್ಮನವರ ಭಕ್ತಿ ಮಾರ್ಗ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ. 12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಮಹಿಳೆಯರ, ಶೋಷಿತರ ಪರವಾಗಿ ಧ್ವನಿಯಾಗಿದ್ದ ಅವರನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿರುವ ಸಮಾಜದ ವಿದ್ಯಾರ್ಥಿಗಳನ್ಜು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಕಾ.ತಿ.ಮಾಸ್ತರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ರೇವಣ್ಣ, ಮುಖಂಡರಾದ ವಿನಯ್ ಕುಮಾರ್, ಎಂ.ಎನ್.ವಿಜಯಲಕ್ಷ್ಮಿ, ಎಸ್.ರಾಜಣ್ಣ, ವಿನಯ್, ಗ್ರಾಪಂ ಮಾಜಿ ಅಧ್ಯಕ್ಷೆ ಪವಿತ್ರಾ ಪ್ರದೀಪ್, ಸದಸ್ಯ ಬಿ.ಟಿ. ಹನುಮಾರೆಡ್ಡಿ, ಮಾಜಿ ಅಧ್ಯಕ್ಷ ಬಿ.ಟಿ. ಮಂಜುನಾಥ್ ಹಾಗೂ ಯುವ ಘಟಕದ ಸದಸ್ಯರು ಇದ್ದರು.