ಜಗಳೂರು ತಾಲೂಕಲ್ಲಿ ಕೆರೆ, ಕಟ್ಟೆಗಳಿಗೆ ನೀರು

| Published : May 22 2024, 12:45 AM IST

ಸಾರಾಂಶ

ಸೋಮವಾರ ರಾತ್ರಿ ಸುರಿದ ಕೃತ್ತಿಕಾ ಮಳೆಯಬ್ಬರಕ್ಕೆ ಜಗಳೂರು ತಾಲೂಕಿನ ಗಡಿಮಾಕುಂಟೆ, ಹುಚ್ಚವ್ವನಹಳ್ಳಿ, ದೊಡ್ಡಬೊಮ್ಮನಹಳ್ಳಿ ಸೇರಿದಂತೆ ಅನೇಕ ಕೆರೆಗಳಿಗೆ ನೀರು ಹರಿದುಬಂದಿದೆ. ಚೆಕ್‌ ಡ್ಯಾಂಗಳು ತುಂಬಿ ಅನೇಕ ಕೆರೆಗಳಿಗೆ ಶೇ.30ರಷ್ಟು ನೀರು ಸಂಗ್ರಹವಾಗಿದೆ. ಸಿಡಿಲು ಬಡಿದು ಹಸು ಸತ್ತರೆ, ಅಡಕೆ ಮರಗಳಿಗೆ ಹಾನಿಯಾಗಿದೆ.

- ಸಿಡಿಲು ಬಡಿದು ಹಸು ಸಾವು, 40 ಅಡಕೆ ಮರಗಳಿಗೆ ಹಾನಿ, ಮನೆಗಳ ಕುಸಿತ - - -

ಕನ್ನಡಪ್ರಭ ವಾರ್ತೆ ಜಗಳೂರು

ಸೋಮವಾರ ರಾತ್ರಿ ಸುರಿದ ಕೃತ್ತಿಕಾ ಮಳೆಯಬ್ಬರಕ್ಕೆ ತಾಲೂಕಿನ ಗಡಿಮಾಕುಂಟೆ, ಹುಚ್ಚವ್ವನಹಳ್ಳಿ, ದೊಡ್ಡಬೊಮ್ಮನಹಳ್ಳಿ ಸೇರಿದಂತೆ ಅನೇಕ ಕೆರೆಗಳಿಗೆ ನೀರು ಹರಿದುಬಂದಿದೆ. ಚೆಕ್‌ ಡ್ಯಾಂಗಳು ತುಂಬಿ ಅನೇಕ ಕೆರೆಗಳಿಗೆ ಶೇ.30ರಷ್ಟು ನೀರು ಸಂಗ್ರಹವಾಗಿದೆ. ಸಿಡಿಲು ಬಡಿದು ಹಸು ಸತ್ತರೆ, ಅಡಕೆ ಮರಗಳಿಗೆ ಹಾನಿಯಾಗಿದೆ. ಗಡಿಮಾಕುಂಟೆ ಕೆರೆಗೆ 6 ಅಡಿ ನೀರು ಬಂದಿದೆ. ಹುಚ್ಚವ್ವನಹಳ್ಳಿ ಕೆರೆ ತುಂಬಲು ಇನ್ನು ಎರಡು ಅಡಿ ಬಾಕಿ ಇದೆ. ಏರಿ, ಚೆಕ್ ಡ್ಯಾಂಗಳು ಒಡೆದುಹೋಗಿವೆ. ರಾತ್ರಿಯಿಡೀ ಸುರಿದ ಮಳೆಗೆ ದೊಡ್ಡಬೊಮ್ಮನಹಳ್ಳಿ ಗ್ರಾಮದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಅಣಬೂರು ಕೆರೆಗೆ ಸುಮಾರು 7 ಅಡಿಯಷ್ಟು ನೀರು ಹರಿದುಬಂದಿದೆ.

ಸಿಡಿಲು ಬಡಿದು ಹಸು ಸಾವು, ಅಡಕೆ ಮರಗಳಿಗೆ ಹಾನಿ:

ಜಮ್ಮಾಪುರ ಕೆರೆಗೆ ಅರಿಶಿಣಗುಂಡಿ ಹಳ್ಳದಿಂದ ಸಾಕಷ್ಟು ನೀರು ಹರಿದುಬರುತ್ತಿದೆ. ಕೊಲಂಗಟ್ಟೆ ಗ್ರಾಮದ ಬಿ.ಎನ್.ರುದ್ರೇಶ್ ಎಂಬ ರೈತನಿಗೆ ಸೇರಿದ 3 ಎಕರೆ ಅಡಕೆ ತೋಟದಲ್ಲಿ ಸಿಡಿಲು ಬಡಿದು 40 ಮರಗಳಿಗೆ ಸುಟ್ಟುಹೋಗಿವೆ. ಮುಷ್ಟಿಗರಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಾಗರಾಜ್ ಎಂಬವರ ಆಕಳು ಮೃತಪಟ್ಟಿದೆ. ರಸ್ತೆ ಮಾಕುಂಟೆ 2, ಕಾಟನೇಹಳ್ಳಿ 2, ರಸ್ತೆ ಮಾಕುಂಟೆ ಗೊಲ್ಲರಹಟ್ಟಿ 2 ಮುಚ್ಚನೂರು 2 ವಿದ್ಯುತ್ ಕಂಬಗಳು ಬುಡಸಮೇತ ಬಿದ್ದಿವೆ. ಇದರಿಂದ ಬಹುತೇಕ ಗ್ರಾಮಗಳಲ್ಲಿ ರಾತ್ರಿ ಪೂರ್ತಿ ವಿದ್ಯುತ್ ನಿಲುಗಡೆ ಆಗಿತ್ತು.

ಅಲ್ಲದೇ, ಕೆಳಗೋಟೆ ಗ್ರಾಮದ ವಿಶಾಲಕ್ಷಮ್ಮ, ಶಂಭು ಮನೆ, ಬಣಕಾರು ಶರಣಪ್ಪ ದನದ ಕೊಟ್ಟಿಗೆ, ದೇವಿಕೆರೆ ಪ್ರೇಮಕ್ಕ, ಮಲ್ಲಾಪುರ ತಿಪ್ಪೇಸ್ವಾಮಿ, ಕಟ್ಟಿಗೆ ಹಳ್ಳಿಯಲ್ಲಿ 1 ಮನೆ, ದೊಡ್ಡಬೊಮ್ಮನಹಳ್ಳಿ ಲಕ್ಕಮ್ಮ ಮನೆ ಸಂಪೂರ್ಣ ಮಳೆಗೆ ಕುಸಿದುಬಿದ್ದಿವೆ. ಅಣಬೂರು ನಾಗರಾಜ್ ಮನೆ, ಮರಿಕುಂಟೆ 1, ಮಾಳಮ್ಮನಹಳ್ಳಿ 1 ಸೇರಿದಂತೆ 15ಕ್ಕೂ ಹೆಚ್ಚು ಮನೆಗಳು ಮಳೆ ಕುಸಿದುಬಿದ್ದಿವೆ.

- - - -21ಜೆಎಲ್ಆರ್ ಚಿತ್ರ1:

ಜಗಳೂರು ತಾಲೂಕಿನ ದೊಡ್ಡಬೊಮ್ಮನಹಳ್ಳಿಯಲ್ಲಿ ತುಂಬಿ ಹರಿಯುತ್ತಿರುವ ಚೆಕ್‌ ಡ್ಯಾಂ ನೀರು.