ಸಾರಾಂಶ
ಕೆರೆಯ ಕೋಡಿ ಒಡೆದ ಪರಿಣಾಮ ರಸ್ತೆ ಕಿತ್ತು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಜೋಳ, ಗೋಧಿ, ಕಡಲೆ, ಬಿತ್ತನೆ ಬೀಜ, ಗೊಬ್ಬರ, ದನಕರುಗಳಿಗೆ ಶೇಖರಣೆ ಮಾಡಿಟ್ಟ ಹೊಟ್ಟು, ಮೇವು, ಬಣವೆ, ಚಕ್ಕಡಿ ಹಾಳಾಗಿವೆ.
ಕುಂದಗೋಳ: ತಾಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಕಂಬನಿಹಳ್ಳ ತುಂಬಿ ಹರಿದು ಕೆರೆಗೆ ನೀರು ನುಗ್ಗಿದೆ. ಕೆರೆ ಕೋಡಿ ಬಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಕೆರೆಯ ಕೋಡಿ ಒಡೆದ ಪರಿಣಾಮ ರಸ್ತೆ ಕಿತ್ತು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಜೋಳ, ಗೋಧಿ, ಕಡಲೆ, ಬಿತ್ತನೆ ಬೀಜ, ಗೊಬ್ಬರ, ದನಕರುಗಳಿಗೆ ಶೇಖರಣೆ ಮಾಡಿಟ್ಟ ಹೊಟ್ಟು, ಮೇವು, ಬಣವೆ, ಚಕ್ಕಡಿ ಹಾಳಾಗಿವೆ. ಅಲ್ಲದೆ, ಮೂರ್ನಾಲ್ಕು ಮನೆಗಳು ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಇಷ್ಟಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಪಂ ಸದಸ್ಯರಾದ ಮಂಜುನಾಥ ಬೂದಪ್ಪನವರ ಸೇರಿದಂತೆ ಗ್ರಾಮಸ್ಥರು ಆರೋಪಿಸಿದರು.ಸ್ಥಳಕ್ಕೆ ಸೋಮವಾರ ಶಾಸಕ ಎಂ.ಆರ್. ಪಾಟೀಲ ಭೇಟಿ ನೀಡಿ ಹಾನಿಯಾದ ಪ್ರದೇಶ ವೀಕ್ಷಿಸಿದರು. ಈ ವೇಳೆ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು, ಗ್ರಾಮದ ಕೆರೆ ಕೋಡಿ ಒಡೆದಿರುವ ಬಗ್ಗೆ ತುರ್ತು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಪ್ಪನವರ, ಉಪಾಧ್ಯಕ್ಷ ರತ್ನವ್ವ ಪಡೆಸೂರ, ಮಾಲತೇಶ ಶ್ಯಾಗೋಟಿ, ನಾಗನಗೌಡ ಸಾತ್ಮಾರ, ಬಸವರಾಜ ಗುಡಗೇರಿ, ರಾಮಣ್ಣ ಇಂಗಳಹಳ್ಳಿ, ಅಡವಯ್ಯ ಕೂಬಿಹಾಳಮಠ, ಶೇಖಪ್ಪ ಅಮರಾವತಿ, ಪಿಡಿಒ ಬಸವರಾಜ ಭಾಗಲ್, ಗ್ರಾಮ ಲೆಕ್ಕಾಧಿಕಾರಿ, ಜಗದೀಶ ನಾಯಕ್ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಇದ್ದರು.