ನವಲಗುಂದ:
ಕೆರೆಗಳು ಕೇವಲ ಜಲಾಶಯವಲ್ಲ, ಗ್ರಾಮೀಣ ಜೀವನದ ಜೀವನಾಡಿಗಳಾಗಿವೆ. ಅದರ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳು ಶೀಘ್ರ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳ್ಳುವಂತೆ ಶಾಸಕ ಎನ್.ಎಚ್. ಕೋನರಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಗುಡಿಸಾಗರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಬಹುದಿನಗಳ ಕನಸಾಗಿದ್ದ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ವೀಕ್ಷಿಸಿ ಮಾತನಾಡಿದ ಅವರು, ನಿಮ್ಮ ಗ್ರಾಮದ ಕೆರೆಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳಿ. ಗ್ರಾಮದ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೇಡಿಕೆಗಳು ಇದ್ದರೆ ನೇರವಾಗಿ ನನ್ನೊಂದಿಗೆ ಕುರಿತು ಚರ್ಚೆ ನಡೆಸಿ ಎಂದರು.
ನಂತರ ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಸ್ವಚ್ಛ ಗ್ರಾಮ- ಸುಂದರ ಗ್ರಾಮ” ಎಂಬ ಸಂಕಲ್ಪದೊಂದಿಗೆ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಸ್ವಚ್ಛತಾ ಅರಿವು ಮೂಡಿಸಿದ ಶಾಸಕರು, ಊರಿನಲ್ಲಿ ಇಂತಹ ಸ್ವಚ್ಛತಾ ಕಾರ್ಯಕ್ರಮ ತಿಂಗಳಿಗೊಮ್ಮೆಯಾದರೂ ಮಾಡಿ ಊರನ್ನು ಶುಚಿಯಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.ತಹಸೀಲ್ದಾರ್ ಸುಧೀರ ಸಾಹುಕಾರ, ಎಸ್.ಎಸ್. ಲಂಗೂಟಿ, ಗ್ರಾಪಂ ಮಾಜಿ ಅಧ್ಯಕ್ಷೆ ರತ್ನವ್ವ ಗುಡಿಸಲಮನಿ, ಬಸಣ್ಣ ಉಳ್ಳಾಗಡ್ಡಿ, ಫಕ್ಕೀರೇಶ ಪಡೆಸೂರ, ಶಿವು ಗುಡಿಸಲಮನಿ, ಗಿರೀಶ ದೇವರಡ್ಡಿ, ಗುರುಸಿದ್ದಪ್ಪ ಪೂಜಾರ, ನಿಜಲಿಂಗಪ್ಪ ಗಾಡದ, ಶಂಕ್ರಪ್ಪ ಬಾಗೂರ, ಚಳ್ಳಪ್ಪ ಜಂಗಣ್ಣವರ, ಸೀನಪ್ಪ ಗಾಡದ, ಮಾರುತಿ ಪೂಜಾರ ಸೇರಿದಂತೆ ಹಲವರಿದ್ದರು.