ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್ಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರೂ ಸಹ ಎಲ್ಲಾ ವಿದ್ಯಾರ್ಥಿಗಳಿಗೂ ಹಾಜರಾತಿ ಹಾಕಿ ಪ್ರತಿ ವಿದ್ಯಾರ್ಥಿಗೆ ಸರ್ಕಾರ ನೀಡುವ ಮಾಸಿಕ 1700 ರು.ಗಳ ಪ್ರತಿ ತಿಂಗಳು ಲಕ್ಷಾಂತರ ರು.ಗಳನ್ನು ವಾರ್ಡನ್ ಹಾಗೂ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕಿನ ದಲಿತ ಮುಖಂಡರು ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿರಿಯ ದಲಿತ ಮುಖಂಡರು ಹಾಗೂ ತಾಲೂಕು ದರಖಾಸ್ತು ಕಮಿಟಿ ಸದಸ್ಯರಾದ ಬಸ್ತಿ ರಂಗಪ್ಪ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿನ ಅಕ್ರಮಗಳ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಬರೆದಿರುವ ಪತ್ರ ಬಿಡುಗಡೆ ಮಾಡಿದರು. ತಾಲೂಕಿನ 7 ಮೆಟ್ರಿಕ್ ಪೂರ್ವ ಮತ್ತು 2 ಮೆಟ್ರಿಕ್ ನಂತರದ ಹಾಸ್ಟೆಲ್ಗಳು ಸೇರಿ ಒಟ್ಟು 12 ಹಾಸ್ಟೆಲ್ಗಳಿಗೆ ಇವುಗಳ ನಿರ್ವಹಣೆಗೆ ಕೇವಲ 3 ಮಂದಿ ಮಾತ್ರ ವಾರ್ಡನ್ಗಳು ಇದ್ದಾರೆ. ಒಬ್ಬ ವಾರ್ಡನ್ 4 ಹಾಸ್ಟೆಲ್ಗಳ ಜವಾಬ್ದಾರಿಯಂತೆ ಮೂರು ಮಂದಿಗೆ 12 ವಿದ್ಯಾರ್ಥಿ ನಿಯಲಗಳ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದರು.
ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದ್ದರೂ ಮಕ್ಕಳ ಸುರಕ್ಷತೆ ಇಲ್ಲದಂತಾಗಿದೆ. ಮಕ್ಕಳಿಗೆ ಬಿಸಿ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ರಜಾ ದಿನಗಳಲ್ಲಿ ಮಕ್ಕಳನ್ನು ಬಲವಂತವಾಗಿ ಮನೆಗೆ ಹೋಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.ಕಡಿಮೆ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿ ಹಾಜರಿದ್ದರೂ ಸಹ ಎಲ್ಲಾ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ ಎಂದು ಹಾಜರಾತಿ ಪುಸ್ತಕದಲ್ಲಿ ದಾಖಲಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿ ಪ್ರತಿ ವಿದ್ಯಾರ್ಥಿಗೆ ಸರ್ಕಾರವು ನೀಡುವ 1700 ರು. ಗಳನ್ನು ಹಾಸ್ಟೆಲ್ ವಾರ್ಡನ್ ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಪರಸ್ಪರ ಶಾಮೀಲಾಗಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಒಬ್ಬ ವಾರ್ಡನ್ಗೆ 4 ಹಾಸ್ಟೆಲ್ ಜವಾಬ್ದಾರಿ ಕೊಡಲಾಗಿದೆ. ಈ ಬಗ್ಗೆ ಹಲವು ಬಾರಿ ಅವ್ಯವಹಾರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲಾ ಅಧಿಕಾರಿಗಳು ಶಾಮಿಲಾಗಿ ಹಣ ದುರುಪಯೋಗಪಡಿಸಿಕೊಂಡು ಮಕ್ಕಳಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಒಬ್ಬರೇ ವಾರ್ಡನ್ ಹಲವು ಹಾಸ್ಟೆಲ್ಗಳ ನಿರ್ವಹಣೆಯಿಂದಾಗಿ ಹೆಣ್ಣು ಮಕ್ಕಳಿಗೆ ಸುರಕ್ಷೆಯೇ ಇಲ್ಲದಂತಾಗಿದೆ. ಹಾಸ್ಟೆಲ್ಗಳಲ್ಲಿ ಮಕ್ಕಳ ಸುಳ್ಳು ಹಾಜರಾತಿ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಹಣವನ್ನು ಉಳಿಸಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಕಿಕ್ಕೇರಿ ರಾಜಣ್ಣ, ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ಮುದುಗೆರೆ ಮಹೇಂದ್ರ, ತಾಲೂಕು ಉಪಾಧ್ಯಕ್ಷ ಬಂಡಿಹೊಳೆ ಕೃಷ್ಣಮೂರ್ತಿ, ಎಂ.ಕೆ.ರಾಜಶೇಖರ್, ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ವಿವೇಕ್, ಪವಿಕುಮಾರ್, ಬಂಡಿಹೊಳೆ ರಮೇಶ್, ಹರಿಹರಪುರ ರಂಗರಾಮು, ಶಾಂತಮ್ಮ, ಪದ್ಮಾವತಿ ಸೇರಿದಂತೆ ಹಲವು ಮುಖಂಡರು ಇದ್ದರು.