ರವಿ ವಜಾಕ್ಕೆ ಲಕ್ಷ್ಮೀ ಬೆಂಬಲಿಗರ ಆಗ್ರಹ

| Published : Dec 22 2024, 01:31 AM IST

ಸಾರಾಂಶ

ಸಚಿವರ ವಿರುದ್ಧ ಸದನದಲ್ಲಿಯೇ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರ ಬೆಂಬಲಿಗರು ಬೆಳಗಾವಿಯಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಸಚಿವರ ವಿರುದ್ಧ ಸದನದಲ್ಲಿಯೇ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರ ಬೆಂಬಲಿಗರು ಬೆಳಗಾವಿಯಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಸಿಪಿಎಡ್‌ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಳಿಕ, ಚನ್ನಮ್ಮ ವೃತ್ತದಲ್ಲಿ ಸಿ.ಟಿ.ರವಿಯವರ ಅಣಕು ಶವಯಾತ್ರೆ ನಡೆಸಿದರು. ಅವರ ವಿರುದ್ಧ ಘೋಷಣೆ ಕೂಗಿ, ಪ್ರತಿಕೃತಿಗೆ ಸೀರೆ ಉಡಿಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ರವಿಯವರು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಾತ್ರವಲ್ಲ, ಇಡೀ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ. ರವಿಯವರು ಕೂಡಲೇ ಕ್ಷಮೆಯಾಚಿಸಬೇಕು. ಅವರ ಪರಿಷತ್ ಸದಸ್ಯತ್ವ ರದ್ದು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುವರ್ಣವಿಧಾನಸೌಧಕ್ಕೆ ನುಗ್ಗಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್‌ ಅವರ ಖಾಸಗಿ ಪಿಎ ಸಂಗನಗೌಡ ಪಾಟೀಲ ಸೇರಿ ಹೆಬ್ಬಾಳ್ಕರ್‌ರ ಸಹಸ್ರಾರು ಅಭಿಮಾನಿಗಳು ಪ್ರತಿಭಟನಾ ಮೆರ‍ಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಆಯೋಜಿಸಲಾಗಿತ್ತು.

ಇದೇ ವೇಳೆ, ಹಾಸನ, ರಾಮನಗರ, ಶಿವಮೊಗ್ಗ, ರಾಯಚೂರು, ಹುಬ್ಬಳ್ಳಿ ಸೇರಿ ರಾಜ್ಯದ ಇತರೆಡೆಯೂ ಕಾಂಗ್ರೆಸ್‌ನಿಂದ ಪ್ರತಿಭಟನೆಗಳು ನಡೆದವು. ಕೋಟ್‌:

ಸಿ.ಟಿ.ರವಿ ಆಡಿದ ಮಾತಿನಿಂದ ತಾಯಿ ಅಷ್ಟೇ ಅಲ್ಲ, ಇಡೀ ಕ್ಷೇತ್ರದ ಜನ ನೊಂದಿದ್ದಾರೆ. ನನ್ನ ತಾಯಿಯನ್ನು ಇಡೀ ಕ್ಷೇತ್ರದ ಜನರು ಮನೆಮಗಳಂತೆ ಕಾಣ್ತಾರೆ, ಪ್ರೀತಿಸುತ್ತಾರೆ. ಬಿಜೆಪಿ ನಾಯಕರು ಅಂತರಂಗದಲ್ಲಿ ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಜಯೇಂದ್ರ, ಆರ್‌.ಅಶೋಕ್‌ ಮನದಲ್ಲಿ ಸಿ.ಟಿ.ರವಿಗೆ ಛೀ.. ಥೂ... ಅಂತಿರ್ತಾರೆ. ಆದರೆ, ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ಮಣಿದು ಈ ಇಬ್ಬರು ನಾಯಕರು ರವಿ ಬೆನ್ನಿಗೆ ನಿಂತಿದ್ದಾರೆ.

- ಮಣಾಲ್‌ ಹೆಬ್ಬಾಳಕರ, ಕಾಂಗ್ರೆಸ್ ಯುವ ಮುಖಂಡ.