ಸಾರಾಂಶ
ನರಗುಂದ: ತಾಲೂಕಿನಲ್ಲಿ ಬುಧವಾರ ರಾತ್ರಿ ಜೋರಾದ ಮಳೆ ಸುರಿದು ರೈತರು ಜಮೀನುಗಳ ರಕ್ಷಣೆಗೆಂದು ನಿರ್ಮಿಸಿದ ಬದುಗಳು ಒಡೆದಿದ್ದು, ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಪ್ರಸಕ್ತ ವರ್ಷ ಮುಂಗಾರು ಮಳೆ ಪ್ರಾರಂಭದಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೃತಿಕಾ ಮತ್ತು ಮೃಗಶಿರಾ ಮಳೆಗಳು ಉತ್ತಮವಾಗಿ ಸುರಿಯುತ್ತಿದ್ದು, ಅನ್ನದಾತರಿಗೆ ಹೊಸ ಹುಮ್ಮಸ್ಸು ತಂದಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಕೃತಿಕಾ ಮಳೆ ಉತ್ತಮವಾಗಿದೆ. ಆದರೆ ರೋಹಿಣಿ ಮಳೆ ರೈತ ಸಮುದಾಯಕ್ಕೆ ಕೈ ಕೊಟ್ಟಿದ್ದರಿಂದ ರೈತ ಸಮುದಾಯ ಆತಂಕಕ್ಕೆ ಸಿಲುಕಿತ್ತು. ಆದರೆ ನಂತರ ದಿನಗಳಲ್ಲಿ ಮೃಗಶಿರಾ ಮಳೆ ಉತ್ತಮವಾಗಿ ಆಗುತ್ತಿದೆ. ತಾಲೂಕಿನಲ್ಲಿ ಬುಧವಾರ ರಾತ್ರಿ ಸತತ 8 ರಿಂದ10 ಗಂಟೆ ಅಬ್ಬರದ ಮಳೆ ಆಗಿದ್ದರಿಂದ ರೈತರ ಜಮೀನುಗಳು ಕೆರೆಯಂತಾಗಿ ರೈತರ ಜಮೀನುಗಳಿಗೆ ನುಗ್ಗಿ ಹೆಸರು ಬೆಳೆ ಮಳೆ ಪ್ರವಾಹ ನೀರಿನ ರಭಸಕ್ಕೆ ಕಿತ್ತು ಹೋಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ.
ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು, ಅನ್ನದಾತರಿಗೆ ಒಂದು ಕಡೆ ಸಂತೋಷವಾದರೆ ಮತ್ತೊಂದೆಡೆ ಅವಾಂತರ ಸೃಷ್ಟಿಸಿ ಸಂಕಷ್ಟ ತಂದಿದೆ. ರೈತರು ಬೇಸಗಿಯ ಸಮಯದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಜಮೀನುಗಳಿಗೆ ನಾಲ್ಕು ದಿಕ್ಕುಗಳಲ್ಲಿ ಬದು(ಒಡ್ಡು) ನಿರ್ಮಿಸಿದ್ದರು. ಆದರೆ, ವಾಡಿಕೆಗಿಂತ ಒಂದೇ ದಿನಕ್ಕೆ 74.6ಮಿಲಿ ಮೀಟರ್ ಹೆಚ್ಚು ಮಳೆ ಸುರಿದಿದ್ದರಿಂದ ಬದುಗಳಿಗೆ ಹಾನಿಯಾಗಿ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.ನರಗುಂದ ಭಾಗದಲ್ಲಿ ಮೃಗಶಿರಾ ಮಳೆಗೆ ಕಿತ್ತು ಹೋಗಿರುವ ಜಮೀನಿನ ಬದು, ಮಣ್ಣು ರಕ್ಷಣೆಗೆ ನಿರ್ಮಿಸಿದ ಬದುಗಳು ಒಂದೇ ದಿನದ ಮಳೆಗೆ ಕಿತ್ತುಕೊಂಡು ಹೋಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಜಮೀನುಗಳು ಶಕ್ತಿ ಕಳೆದುಕೊಳ್ಳುತ್ತಿವೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ತಾಲೂಕಿನ ಚಿಕ್ಕನರಗುಂದ ಗ್ರಾಮದ ರೈತ ಶಿವಪ್ಪ ಸಾತಣ್ಣವರ ಹೇಳಿದರು.